ಪೋರ್ಜರಿ ದಾಖಲೆ ಸೃಷ್ಟಿಸಿ ಎಕರೆಗಟ್ಟಲೆ ಜಮೀನು ಮಾರಾಟ ಆರೋಪ – ಪೊಲೀಸ್ ದೂರು

ಕುಂದಾಪುರ: ಸತ್ತು ಹೋದವರ ಹೆಸರಿನಲ್ಲಿ ಪೋಜರಿ ಮಾಡಿ ಎಕ್ಕರೆಗಟ್ಟಲೆ ಭೂಮಿಯನ್ನು ಬೇರೆಯವರ ಹೆಸರಿಗೆ ಅಕ್ರಮವಾಗಿ ಮಾರಾಟ ಮಾಡಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕಿನ ಕುಳುಂಜಿ ಎಂಬಲ್ಲಿ ನಡೆದಿದೆ.
ಕುಳುಂಜೇ ನಿವಾಸಿ ಯಾಗಿದ್ದ ಕುಪ್ಪಯ್ಯ ಎಂಬವರ ಹೆಸರಿನಲ್ಲಿ ಸರ್ವೆ ನಂಬರ್ 140/2 ರಲ್ಲಿ 3.83 ಎಕ್ರೆ ಪಿತ್ರಾರ್ಜಿತ ಆಸ್ತಿಯಿದ್ದು, ಕುಪ್ಪಯ್ಯ ರವರಿಗೆ ವೆಂಕಟೇಶ್ , ಕೆ ಲಕ್ಷ್ಮೀ ಆರ್ ರಾವ್, ಬಾಬುರಾಯ, ಸರಸ್ವತಿ , ಕೆ ಗಣಪತಿ, ಕೃಷ್ಣ, ರತ್ನಾವತಿ, ಕೆ ಸೂರ್ಯನಾರಾಯಣ, ಶ್ರೀಧರ, ಪ್ರಭಾಕರ ಎಂಬ 10 ಜನ ಮಕ್ಕಳಿದ್ದರು. ಇವರ ಪೈಕಿ ಶ್ರೀಧರ, ಪ್ರಭಾಕರ ಹೊರತುಪಡಿಸಿ ಉಳಿದವರು ಮೃತಪಟ್ಟಿದ್ದು, ಆಸ್ತಿಯು ಈ ವರೆಗೂ ವಿಭಾಗವಾಗಿರಲಿಲ್ಲ.
ಶ್ರೀಧರ ಎಂಬುವರಿಗೆ ಕುಟುಂಬದ ಆಸ್ತಿಯನ್ನು ತನಗೆ ಬಿಟ್ಟುಕೊಡಬೇಕು ಎಂಬುದಾಗಿ ಪ್ರಭಾಕರ್ ಒತ್ತಾಯಿಸುತ್ತಾ ಬಂದಿದ್ದು, ಕುಟುಂಬದ ಸದಸ್ಯರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿ ಪ್ರಭಾಕರ ಇತರ ಆರೋಪಿಗಳಾದ ರಾಘವೇಂದ್ರ, ಲೋಕೇಶ್, ಸುರೇಂದ್ರ, ಸುಧಾಕರ, ಗುರುರಾಜ್, ದಿನೇಶ್, ರಾಜಣ್ಣ, ಗಜೇಂದ್ರ, ನಾರಾಯಣ ಎಂಬುವರ ಜೊತೆ ಸೇರಿ ತನ್ನ ತಂದೆಯ ಆಸ್ತಿಯ ಪಹಣಿ ಪತ್ರದಲ್ಲಿ 1 ಎಕ್ರೆ ಆಸ್ತಿಯು ಸ ನಂ 140/2 ರಂತೆ ತನ್ನ ಕುಟುಂಬದ ಜೀವಂತ ಹಾಗೂ ಮೃತ ಪಟ್ಟ ಸದಸ್ಯರ ಹೆಸರಿನಲ್ಲಿ ಜಂಟಿ ವಿಭಾಗದಂತೆಯು ಹಾಗೂ ಉಳಿದ 2.83 ಎಕ್ರೆ ಆಸ್ತಿಯು ಸ.ನಂ 140/3 ರಂತೆ ಮನೋಹರ ಜಿ ಜಿ ಎನ್ನುವವರ ಹೆಸರಿನಲ್ಲಿ ಕ್ರಯ ಪತ್ರದಂತೆ ಬದಲಾವಣೆ ಮಾಡಿದ್ದಾನೆ.
ದಾಖಲಾತಿಗಳನ್ನು ಪರಿಶೀಲಿಸಿದಾಗ ಕುಟುಂಬದಲ್ಲಿ ಮೃತ ಪಟ್ಟ ಸದಸ್ಯರು ಜೀವಂತ ಇದ್ದಾರೆ ಎಂಬುದಾಗಿ ತೊರಿಸಿಕೊಂಡು ಯಾರದ್ದೋ ಆಧಾರ ಕಾರ್ಡನಲ್ಲಿ ಅವರ ಪೋಟೋಗಳನ್ನು ಪೋರ್ಜರಿಯಿಂದ ಸೇರಿಸಿ ಫವರ್ ಆಪ್ ಅಟಾರ್ನಿ ನೀಡಿದಂತೆ ಮೋಸ ಮತ್ತು ವಂಚನೆಯಿಂದ ಸುಳ್ಳು ಜಿಪಿಎ ಗಳನ್ನು ತಯಾರಿಸಿ, ಜೀವಂತ ಸದಸ್ಯರ ಬದಲಿಗೆ ಅಪರಿಚಿತ ವ್ಯಕ್ತಿಗಳನ್ನು ನೊಂದಣಿ ಕಚೇರಿಗೆ ಕರೆದುಕೊಂಡು ಬಂದು ಜೀವಂತ ಶಂಕರನಾರಾಯಣದ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ವಿಭಾಗ ಪತ್ರವನ್ನು ದಿನಾಂಕ 21/12/2021 ರಂದು ನೊಂದಣಿ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಪಿತ್ರಾರ್ಜಿತ ಹಕ್ಕಿನ 2.83 ಎಕ್ರೆ ಆಸ್ತಿಯನ್ನು ಪ್ರಭಾಕರ ತನ್ನ ಹೆಸರಿಗೆ ವಿಂಗಡಿಸಿಕೊಂಡು ಉಳಿದ 1.00 ಎಕ್ರೆ ಆಸ್ತಿಯನ್ನು ಕುಟುಂಬದ ಹೆಸರಿನಲ್ಲಿ ವಿಂಗಡಿಸಿದ್ದು, ತನ್ನ ಹೆಸರಿಗೆ ಮಾಡಿಸಿಕೊಂಡ 2.83 ಎಕ್ರೆ ಆಸ್ತಿಯನ್ನು ಮನೋಹರ ಎಂಬಾತನಿಗೆ 20 ಲಕ್ಷ ರೂಪಾಯಿಗೆ ಕ್ರಯ ಪತ್ರ ಮಾಡಿಕೊಟ್ಟಿದ್ದು, ನಂತರ ದಿನಾಂಕ 30/10/2024 ರಂದು ಕುಟುಂಬದ ಹೆಸರಿನಲ್ಲಿ ವಿಂಗಡಿಸಿದ್ದ 1.00 ಎಕ್ರೆ ಸ್ಥಳವನ್ನು ಸಹ ತನ್ನ ಹೆಸರಿಗೆ ಅಕ್ರಮವಾಗಿ ಮಾಡಿಸಿಕೊಂಡು ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.