ಯಕ್ಷಗಾನ ಕಲಾವಿದನಿಗೆ ಚೌಕಿಯಲ್ಲಿಯೇ ಹಲ್ಲೆ! – ಯಕ್ಷಾಭಿಮಾನಿಗಳಿಂದ ವ್ಯಾಪಕ ಆಕ್ರೋಶ
ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕಲಾವಿದರದ್ದೇ ಸುದ್ಧಿಗಳು ಹೆಚ್ಚಾಗುತ್ತಿವೆ. ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧವಾಗಿದ್ದ ಯಕ್ಷಗಾನ ಮೇಳದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಇದೀಗ ಮಾರಣಕಟ್ಟೆಯ ಬಿ ಮೇಳದ ಸ್ತ್ರೀ ವೇಷ ಕಲಾವಿದನೊಬ್ಬ ಯಕ್ಷಗಾನದ ಚೌಕಿಯಲ್ಲಿಯೇ ಸಹ ಕಲಾವಿದನಿಗೆ ಹಲ್ಲೆ ಮಾಡಿದ ಘಟನೆ ಯಕ್ಷಗಾನ ಕಲಾಭಿಮಾನಿಗಳು ಹಾಗೂ ಯಕ್ಷ ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳವಾರ ಎಲ್ಲೂರು ಸಮೀಪ ಮಾರಣಕಟ್ಟೆಯ ಬಿ. ಮೇಳದಿಂದ ಸೇವಾ ಬಯಲಾಟ ನಡೆದಿತ್ತು. ಪ್ರಸಂಗದಲ್ಲಿ ನಂದಿ ವೇಷ ಮಾಡುವಂತೆ ಸಹ ಕಲಾವಿದ ಪ್ರದೀಪ್ ಆಲೂರು ಎಂಬಾತನಿಗೆ ಸ್ತ್ರೀ ವೇಷದ ಕಲಾವಿದ ಪ್ರದೀಪ್ ಶೆಟ್ಟಿ ನಾರ್ಕಳಿ ಎಂಬಾತ ಹೇಳಿದ್ದ. ಆದರೆ ಅದಕ್ಕೆ ಪ್ರದೀಪ್ ಆಲೂರು ಒಪ್ಪಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಆರೋಪಿ ಪ್ರದೀಪ್ ಶೆಟ್ಟಿ, ಚೌಕಿಯಲ್ಲಿಯೇ ಪ್ರದೀಪ್ ಆಲೂರು ಎಂಬಾತನ ಕುತ್ತಿಗೆ ಹಿಡಿದು ಬಗ್ಗಿಸಿ ಬೆನ್ನಿಗೆ ಹಿಗ್ಗಾಮುಗ್ಗ ಹೊಡೆದಿದ್ದಾನೆ. ಹಲ್ಲೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮೇಳದ ವ್ಯವಸ್ಥಾಪಕರು ಮತ್ತು ಮ್ಯಾನೇಜರ್ ನಿರ್ಲಕ್ಷ್ಯವೇ ಪ್ರದೀಪ್ ಶೆಟ್ಟಿ ಹಲ್ಲೆ ನಡೆಸಲು ಕಾರಣ ಎನ್ನುವ ಆರೋಪಗಳೂ ಕೇಳಿ ಬಂದಿವೆ.
ಆರೋಪಿ ಪ್ರದೀಪ ಶೆಟ್ಟಿ ಈ ಹಿಂದೆಯೂ ಹಲವಾರು ಕಲಾವಿದರಿಗೆ ಹಲ್ಲೆ ನಡೆಸಿ ದರ್ಪ ತೋರಿದ್ದಾನೆ. ಆದರೆ ಸಂಬಂಧಪಟ್ಟವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದಾಗಿ ಕೆಲವೊಂದಿಷ್ಟು ಕಲಾವಿದರು ಕೂಡ ಮೇಳ ಬಿಟ್ಟಿದ್ದಾರೆ ಎನ್ನುವ ಆರೋಪಗಳೂ ಕಲಾವಿದರಿಂದ ಕೇಳಿ ಬಂದಿದೆ.
ಒಟ್ಟಿನಲ್ಲಿ ಮೇಳದ ತಿರುಗಾಟಕ್ಕೆ ಬರಲು ಕಲಾವಿದರು ಹಿಂದೇಟು ಹಾಕುವ ಕಾಲಘಟ್ಟದಲ್ಲಿ ಮೇಳಕ್ಕೆ ಬರುವ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಬದಲು ಹಿಗ್ಗಾ ಮುಗ್ಗಾ ಚೌಕಿಯಲ್ಲಿ ಹೊಡೆಯುವುದಲ್ಲ, ತಪ್ಪು ಮಾಡಿದ ಪ್ರದೀಪ್ ಶೆಟ್ಟಿಗೆ ಶಿಕ್ಷೆಯಾಗಬೇಕು. ಆತನನ್ನು ಮೇಳದಿಂದ ಕೈ ಬಿಡಬೇಕು ಎಂದು ಸಾಮಾಜಿಕ ಜಾಲಾತಾಣದಲ್ಲಿ ಯಕ್ಷಗಾನ ಅಭಿಮಾನಿಗಳು ಆಗ್ರಹಿಸಿದ್ದಾರೆ.