ಸಮಾಜ ಸೇವಕ ಈಶ್ವರ್ ಮಲ್ಪೆ ಟೀಮ್ ಭವಾಭ್ಧಿ ಕಡಲೂರ ಸನ್ಮಾನ – ಟೀಮ್ ಭವಾಭ್ಧಿ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದ ಶಾಸಕ ಕಿರಣ್ ಕೊಡ್ಗಿ
ಕುಂದಾಪುರ: ನಿರಂತರ ಕ್ರಿಯಾಶೀಲವಾಗಿರುವ ಸಂಘಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆಯ ಮೂಲಕ ಅತ್ಯಂತ ಎತ್ತರಕ್ಕೆ ಬೆಳೆಯುತ್ತವೆ. ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡವರನ್ನು ಹುಡುಕಿ ಗೌರವಿಸುವ ಕಾರ್ಯ ಸಂಘ ಸಂಸ್ಥೆಗಳಿಗೆ ಶೋಭೆ ತರುತ್ತದೆ. ಟೀಮ್ ಭವಾಭ್ಧಿ ಪಡುಕರೆ ಇಂತಹಾ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಶನಿವಾರ ಕೋಟತಟ್ಟು ಪಡುಕರೆಯಲ್ಲಿ ಟೀಮ್ ಭವಾಭ್ಧಿ ಪಡುಕರೆ ಇವರ ನಾಲ್ಕನೆ ವರ್ಷದ ಕಡಲೂರ ಸನ್ಮಾನ ಕಾರ್ಯಕ್ರಮದಲ್ಲಿ ಮುಳುಗು ತಜ್ಞ ಜೀವ ರಕ್ಷಕ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಿ ಮಾತನಾಡಿದರು.

ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಮಾತನಾಡಿ, ಈಶ್ವರ್ ಮಲ್ಪೆ ಎಂಬ ದೈತ್ಯ ಸಮಾಜಸೇವಕನ ಕಾರ್ಯವೈಕರಿ ಹಾಗೂ ಸಮಾಜ ಅವರನ್ನು ಗುರುತಿಸುವ ಪರಿ ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಟೀಮ್ ಭವಾಭ್ಧಿ ಅಧ್ಯಕ್ಷ ಸಂತೋಷ ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು. ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ, ಸಮಾಜಸೇವಕ ಶ್ರೀಕಾಂತ್ ಶೆಣೈ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎಚ್ ಪ್ರಮೋದ್ ಹಂದೆ, ಉಪನ್ಯಾಸಕ ಸಂಜೀವ ಗುಂಡ್ಮಿ ಮತ್ತಿತರರು ಉಪಸ್ಥಿತರಿದ್ದರು.
ಟೀಮ್ ಭವಾಭ್ಧಿ ಸಂಚಾಲಕ ರವೀಂದ್ರ ತಿಂಗಳಾಯ ಪ್ರಾಸ್ತಾವಿಸಿದರು. ಮಂಜುನಾಥ್ ನಿರೂಪಿದರು. ಗೌರವ ಸಲಹೆಗಾರ ಗಣೇಶ್ ತಿಂಗಳಾಯ ಸ್ವಾಗತಿಸಿ, ವಂದಿಸಿದರು. ಬಳಿಕ ಮಂಗಳೂರು ಅರೆಹೊಳೆ ನಂದಗೋಕುಲ ಪ್ರತಿಷ್ಠಾನ ಹಾಗೂ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈವಿಧ್ಯ, ಮಂಗಳೂರಿನ ಪ್ರಸಿದ್ಧ ನಾಟಕ ತಂಡದಿಂದ ಪರಮಾತ್ಮ ಪಂಜುರ್ಲಿ ನಾಟಕ ಪ್ರದರ್ಶನಗೊಂಡಿತು.