ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಆತ್ಮಹತ್ಯೆ
ಕುಂದಾಪುರ: ಕುಡಿತದ ಚಟ, ಮಾನಸಿಕ ಖಿನ್ನತೆ ಕೊನೆಗೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಆತ್ಮಹತ್ಯೆ. ಇದು ಬ್ರಹ್ಮಾವರ ತಾಲೂಕಿನ ಕಚ್ಚೂರು ಗ್ರಾಮದಲ್ಲಿ ನಡೆದ ದುರಂತ ಘಟನೆ. ಉಇಲ್ಲಿನ ನಿವಾಸಿ ಸಂತೋಷ್ (42) ವಿಪರೀತ ಮಧ್ಯಪಾನ ಮಾಡುತ್ತಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು, ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದರು. ಮೂರ್ನಾಲ್ಕು ದಿನಗಳಿಂದ ಮಧ್ಯಪಾನ ಮಾಡಿಕೊಂಡು ಬಂದು ತಾನು ಸಾಯುತ್ತೇನೆ, ಬದುಕುವುದಿಲ್ಲವೆಂದು ಹೇಳುತ್ತಿದ್ದರು. ಭಾನುವಾರ ಬೆಳಿಗ್ಗೆ ಬಚ್ಚಲು ಮನೆಗೆ ಹೋದವರು ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾರೆ. ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಮನೆಯವರಿಗೆ ವಿಷಯ ತಿಳಿದಾಗ ಸಂತೋಷ್ ಬಚ್ಚಲು ಕೋಣೆಯಲ್ಲಿ ಅಂಗಾತನೇ ಬಿದ್ದುಕೊಂಡಿದ್ದು, ಮರ್ಮಾಂಗದಿಂದ ರಕ್ತ ಸುರಿಯುತ್ತಿತ್ತು. ತಕ್ಷಣ ಅವರನ್ನು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.