ಕುಂದಾಪುರ: ತಿರುವನಂತಪುರಂ, ಎರ್ನಾಕುಲಂ ಎರಡು ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ – ಹಿತರಕ್ಷಣಾ ಸಮಿತಿ ಹರ್ಷ

ಕುಂದಾಪುರ: ತಿರುವನಂತಪುರಂ – ನಿಜಾಮುದ್ದೀನ್ ಎಕ್ಸ್ಪ್ರೆಸ್ ಮತ್ತು ಎರ್ನಾಕುಲಂ – ನಿಜಾಮುದ್ಧಿನ್ ಎಕ್ಸ್ಪ್ರೆಸ್ ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗಣೇಶ್ ಪುತ್ರನ್ ಹೇಳಿದ್ದಾರೆ.

ಎಕ್ಸ್ಪ್ರೆಸ್ ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ ಬೇಕು ಎನ್ನುವುದು ದಶಕಗಳ ಬೇಡಿಕೆಯಾಗಿತ್ತು. ಕೊಲ್ಲೂರು ಮೂಕಾಂಬಿಕೆಯ ಭಕ್ತರಿಗೆ, ಹಲವು ಧಾರ್ಮಿಕ ಕೇಂದ್ರಗಳಿಗೆ, ಅಲ್ಲದೆ ಕರಾವಳಿ ಕರ್ನಾಟಕದ ಅಸಂಖ್ಯಾತ ಜನ ಮುಂಬಯಿ ಹೊರವಲಯ, ಗುಜಾರಾತ್ ಬಳಿಯ ದಮನ್ , ಸಿಲ್ವಾಸ , ವಾಪಿ ಮತ್ತಿರ ಪ್ರದೇಶಗಳಲ್ಲಿ ವಾಸವಾಗಿದ್ದು ಈ ಪ್ರಯಾಣಿಕರಿಗೆ ಮತ್ಸ್ಯಗಂಧಾ ಮತ್ತು ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿ ಬೇರೆ ರೈಲುಗಳನ್ನು ಹಿಡಿಯ ಬೇಕಾದ ಪರಿಸ್ಥಿತಿ ತಪ್ಪಿದೆ. ಎರ್ನಾಕುಲಂ ಕಡೆಗೆ ತೆರಳುವ ನಿಜಾಮುದ್ದೀನ್ ರೈಲು ಮಧ್ಯಾಹ್ನ 2ಗಂಟೆಗೆ ಪ್ರತೀ ಬುಧವಾರ ದೆಹಲಿ ಕಡೆಗೆ ಮತ್ತು ಶನಿವಾರ ಎರ್ನಾಕುಲಂ ಕಡೆಗೆ ಹಾಗೂ ತಿರುವನಂತಪುರಂ ರೈಲು ಅದೇ ಸಮಯಕ್ಕೆ ಪ್ರತಿ ಗುರುವಾರ ದೆಹಲಿಗೆ, ಪ್ರತಿ ಶನಿವಾರ ತಿರುವನಂತಪುರಂ ಕಡೆಗೆ ಕುಂದಾಪುರದಿಂದ ತೆರಳಲಿದೆ.

ಎಕ್ಸ್ ಪ್ರೆಸ್ ರೈಲು ನಿಲುಗಡೆಗಾಗಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವರ್ಷಗಳ ಬೇಡಿಕೆಯನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮೊದಲ ಸಲ ಕುಂದಾಪುರ ರೈಲು ನಿಲ್ದಾಣಕ್ಕೆ ಬೇಟಿ ನೀಡಿದಾಗ ಸಮಿತಿ ಸಲ್ಲಿಸಿದ್ದು, ಕೇಂದ್ರ ಮಂತ್ರಿ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ಸೋಮಣ್ಣನವರಿಗೆ ಮನವಿ ಮಾಡಿ ಕರಾವಳಿ ಭಾಗದ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಇದೀಗ ಸಂಸದರ ಪ್ರಯತ್ನದಿಂದ ರೈಲು ನಿಲುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.