ಬ್ರಹ್ಮಾವರ: ಡಂಪಿಂಗ್ ಯಾರ್ಡಿಗೆ ಬೆಂಕಿ – ವಾಹನಗಳ ಸಹಿತ ಹಲವು ಸ್ವತ್ತು ಭಸ್ಮ

ಬ್ರಹ್ಮಾವರ: ಇಲ್ಲಿನ ಮೀನು ಮಾರುಕಟ್ಟೆ ಸಮೀಪದಲ್ಲಿರುವ ಕಸ ವಿಲೇವಾರಿ ಮಾಡುವ ಎಸ್.ಎಲ್.ಆರ್.ಎಮ್ ಘಟಕದಲ್ಲಿ ಮದ್ಯರಾತ್ರಿ ಸುಮಾರು ಒಂದುವರೆ ಗಂಟೆಗೆ ಬೆಂಕಿ ಹತ್ತಿಕೊಂಡಿದ್ದು ಸಮೀಪದ ಗ್ರಾಮ ಪಂಚಾಯತ್ ಅಂಗಡಿ ಕೋಣೆಗಳಿಗೂ ಬೆಂಕಿ ತಗುಲಿದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ತಕ್ಷಣ ಸ್ಥಳೀಯರು ನೀಡಿದ ಮಾಹಿತಿಯಿಂದ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಸ್ಥಳೀಯ ಯುವಕರು ಮತ್ತು ಅಗ್ನಿಶಾಮಕ ದಳ ಸಂಭವಿಸಬಹುದಾದ ಬಾರಿ ಅನಾಹುತವನ್ನು ತಪ್ಪಿಸಿವೆ.

ಶುಕ್ರವಾರ ಮಧ್ಯರಾತ್ರಿ ಸುಮಾರು 1:30ಕ್ಕೆ ಡಂಪಿಂಗ್ ಯಾರ್ಡಿನಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗಸ್ತಿನಲ್ಲಿದ್ದ ಬ್ರಹ್ಮಾವರ ಎಎಸ್ಐ ಶಾಂತರಾಜ್ ಹೆಡ್ಕಾಸ್ಟೇಬಲ್ ನಾರಾಯಣಗೌಡ ಹೋಂ ಗಾರ್ಡ್ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳಕ್ಕೆ ಹಾಗೂ ಡಂಪಿಂಗ್ ಎರಡು ಪಕ್ಕದಲ್ಲಿ ಬೆಂಕಿ ಹತ್ತಿಕೊಳ್ಳಬಹುದಾದ ಸಾಧ್ಯತೆ ಇರುವ ಅಂಗಡಿ ಕೋಣೆಗಳ ಮಾಲೀಕರಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಆದರೆ ಅದಾಗಲೇ ಎಸ್.ಎಲ್.ಆರ್.ಎಮ್ ಘಟಕದ ಒಳಗೆ ನಿಲ್ಲಿಸಿದ ಮೂರು ಟಾಟಾ ಏಸ್ ವಾಹನಗಳು, ಒಂದು ಬೊಲೆರೋ ಪಿಕಪ್, ಲಕ್ಷಾಂತರ ಮೌಲ್ಯದ ಕಸ, ಎರಡು ಬೇಲಿಂಗ್ ಮೆಶಿನ್, ಒಂದು ಬರ್ನಿಂಗ್ ಮೆಶಿನ್ , 6 ಸಿಸಿ ಕೆಮರಾಗಳು, ಕಚೇರಿ ಫೈಲ್ ಗಳು, ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸಮೀಪದ ಗುಜರಿ ಅಂಗಡಿಗೂ ಬೆಂಕಿ ತಗುಲಿದ್ದು ಅಲ್ಲಿಯೂ ಹಾನಿ ಸಂಭವಿಸಿದೆ.

ಕುಂದಾಪುರ, ಉಡುಪಿ, ಮಲ್ಪೆ ಮೂರು ಕಡೆಗಳ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಡಲ್ಲಿ ತೊಡಗಿಕೊಂಡವು. ಬೆಂಕಿ ನಂದಿಸುವ ಕೆಲಸ ಮುಂದುವರೆದಿದ್ದು, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಪಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಶತಪ್ರಯತ್ನಪಟ್ಟರೂ ಎಸ್.ಎಲ್.ಆರ್.ಎಮ್ ಸಂಪೂರ್ಣ ಸುಟ್ಟು ಕರಕಲಾಗಿದೆ.