ಪರಕೀಯರ ದಾಳಿಯ ಮಧ್ಯೆಯೂ ಹಿಂದೂ ಧರ್ಮ ಜಗತ್ತಿಗೆ ಮಾದರಿಯಾಗಿದೆ – ಡಾ.ವಿನಾಯಕ ಶೆಣೈ
ಗಂಗೊಳ್ಳಿ: ಹಿಂದು ಧರ್ಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಭದ್ರ ಬುನಾದಿ ಮೇಲೆ ನಿಂತಿದೆ. ಈ ದೇಶದ ಸಂಸ್ಕಾರಯುತ ನಾಗರಿಕರು ಸಮಾಜಕ್ಕೆ ಹಾಗೂ ದೇಶಕ್ಕೆ ಉಪಯುಕ್ತವಾಗಬಲ್ಲರು. ಪರಕೀಯರ ದಾಳಿಗೆ ಸಿಲುಕಿದ ಪರಿಣಾಮ ನಮ್ಮ ಸಂಸ್ಕೃತಿ ಮೇಲೆ ಅತ್ಯಾಚಾರ, ಅವಹೇಳನ ನಡೆಯಿತು. ಹಿಂದು ಧರ್ಮ, ಹಿಂದು ಶಿಕ್ಷಣದ ಮೇಲೆ ಬಹಳ ದಾಳಿ ನಡೆದಿದ್ದರೂ, ಇಂದಿಗೂ ಸನಾತನ ಹಿಂದೂ ಧರ್ಮ ಇತರ ರಾಷ್ಟ್ರಗಳಿಗೆ ಮಾದರಿಯಾಗಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸುರತ್ಕಲ್ನ ಶ್ರೀನಿವಾಸ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ವಿನಾಯಕ ಶೆಣೈ ಹೇಳಿದರು.

ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾ ಭವನದಲ್ಲಿ ಶನಿವಾರ ಜರಗಿದ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇದರ ೩೮ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೌದ್ಧಿಕ್ ನೀಡಿ ಅವರು ಮಾತನಾಡಿದರು. ಪರ್ಸಿನ್ ಮೀನುಗಾರರ ಸೇವಾ ಸಹಕಾರಿ ಸಂಘ ಕೋಟ ಇದರ ನಿರ್ದೇಶಕ ರಾಘವೇಂದ್ರ ವಿ.ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಸಂಗೀತಾ ಆರ್.ಮೇಸ್ತ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಾಯತ್ರಿ ಕೊಡಂಚ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಶು ಮಂದಿರದ ಸದಸ್ಯರಾದ ವಿಜಯಶ್ರೀ ವಿ.ಆಚಾರ್ಯ, ವಸಂತಿ ಖಾರ್ವಿ, ಮಾತಾಜಿ ರತ್ನ ಅತಿಥಿಗಳನ್ನು ಗೌರವಿಸಿದರು. ಮಾಜಿ ಅಧ್ಯಕ್ಷರಾದ ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಸವಿತಾ ಯು.ದೇವಾಡಿಗ ವಂದಿಸಿದರು.