ಗಂಗೊಳ್ಳಿ: ರಸ್ತೆ ತುಂಬಾ ಮರಳು – ಶೌರ್ಯ ತಂಡದಿಂದ ಶ್ರಮದಾನ
ಕುಂದಾಪುರ: ಗಂಗೊಳ್ಳಿ ಗ್ರಾಮದ ಲೈಟ್ಹೌಸ್ ಮುಖ್ಯ ರಸ್ತೆಯಲ್ಲಿ ಸಾಕಷ್ಟು ಮರಳು ಸಂಗ್ರಹಗೊಂಡಿರುವುದರಿಂದ ಜನರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಂಗೊಳ್ಳಿ ಕಾರ್ಯಕ್ಷೇತ್ರದ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಗಂಗೊಳ್ಳಿ ಲೈಟ್ಹೌಸ್ಗೆ ಹೋಗುವ ರಸ್ತೆ ಬದಿಯಲ್ಲಿ ಚರಂಡಿ ಇಲ್ಲದೆ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿದು ಮರಳಿನ ರಾಶಿ ಗುಡ್ಡೆಯಾಗಿದೆ. ಇದರಿಂದ ಅನೇಕ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಸವಾರರು ಗಾಯಗೊಂಡಿರುವ ಘಟನೆಗಳು ನಡೆಯುತ್ತಿತ್ತು. ಇದನ್ನು ಗಮನಿಸಿದ ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ರಸ್ತೆಯಲ್ಲಿ ಬಿದ್ದ ಮರಳನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ವಿಜಯ ಪೂಜಾರಿ ಅವರು ಕಸವನ್ನು ವಿಲೇವಾರಿ ಮಾಡಲು ತಮ್ಮ ಗೂಡ್ಸ್ ವಾಹನವನ್ನು ಒದಗಿಸಿಕೊಡುವುದರ ಮೂಲಕ ತಂಡಕ್ಕೆ ನೆರವಾದರು. ಸ್ಥಳೀಯರಾದ ನಾಗರಾಜ ಶೇರುಗಾರ್ ಶೌರ್ಯ ತಂಡದ ಸದಸ್ಯರ ಜೊತೆ ಕೈಜೋಡಿಸಿದ್ದರು. ಶೌರ್ಯ ತಂಡ ಈ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಲೈಟ್ಹೌಸ್ ಸಂಪರ್ಕ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಚರಂಡಿ ನಿರ್ಮಿಸಲು ಸ್ಥಳಿಯಾಡಳಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶೌರ್ಯ ತಂಡ ಆಗ್ರಹಿಸಿದೆ.