ಬೈಂದೂರು: ವೃತ್ತಿಯಿಂದ ವಜಾಗೊಂಡಿದ್ದ ಮುಖ್ಯ ಶಿಕ್ಷಕಿಯನ್ನು ಮರು ನೇಮಕಗೊಳಿಸಿದ ಸರ್ಕಾರ
ಇದು ಮಾನವೀಯತೆಗೆ ಸಂದ ಜಯ
ಕುಂದಾಪುರ: ನಾಲ್ಕು ವರ್ಷಗಳ ಹಿಂದಿನ ಪ್ರಕರಣಗಳ ತನಿಖೆಯ ಬಳಿಕ 2023ರ ಜೂನ್ ತಿಂಗಳಲ್ಲಿ ಸೇವೆಯಿಂದಲೇ ವಜಾಗೊಂಡಿದ್ದ ಸರ್ಕಾರೀ ಪ್ರೌಢ ಶಾಲೆಯೊಂದರ ಮುಖ್ಯ ಶಿಕ್ಷಕಿಯೊಬ್ಬರನ್ನು ಸರ್ಕಾರ ಮರುನೇಮಕಗೊಳಿಸಿ ಆದೇಶ ನೀಡಿದೆ.

ಜ್ಯೋತಿ ಬಿ. ಎಂಬುವವರೇ ಸೇವೆಗೆ ಮರುನೇಮಕಗೊಂಡ ಮುಖ್ಯ ಶಿಕ್ಷಕಿ. ಜ್ಯೋತಿ ಅವರು ಈ ಹಿಂದೆ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪಪ್ರಾಂಶುಪಾಲರಆಗಿದ್ದ ವೇಳೆ ಅಕ್ಷರ ದಾಸೋಹ ಅವ್ಯವಹಾರಗಳು, ಅಡ್ಡ ನಿಯೋಜನೆ ಮೊದಲಾದ ಆರೋಪಗಳಿಗೆ ಗುರಿಯಾಗಿ ತನಿಖೆ ಎದುರಿಸಿದ್ದರು. ಬಳಿಕ ಅವರನ್ನು ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆ ಸರ್ಕಾರಿ ಪ್ರೌಢ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು.

ಆದರೆ ಅವರು ಎಣ್ಣೆಹೊಳೆ ಶಾಲೆಗೆ 16 ತಿಂಗಳ ಕಾಲ ಗೈರು ಹಾಜರಾಗಿದ್ದರು ಎನ್ನುವ ಕಾರಣಕ್ಕೆ 2023ರ ಜೂನ್ 26ರಂದು ಆಗಿನ ಶಿಕ್ಷಣ ಆಯುಕ್ತರಾಗಿದ್ದ ವಿಶಾಲ್ ಅವರು ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದರು.

ಬಳಿಕ ಜ್ಯೋತಿಯವರು ಮಾನವೀಯ ನೆಲೆಯಲ್ಲಿ ಮರು ಉದ್ಯೋಗ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದರು. ಡಿಸೆಂಬರ್ 2024ನಲ್ಲಿ ಹೊರಡಿಸಲಾದ ಸರ್ಕಾರದ ಪುನರಾವಲೋಕನ ಆದೇಶದಂತೆ ಈ ಹಿಂದೆ ಸೇವೆಯಿಂದ ವಜಾ ಮಾಡಿದ್ದ ದಂಡನಾದೇಶವನ್ನು ಹಾಗೂ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ರದ್ದುಪಡಿಸಿದ್ದು, ಜ್ಯೋತಿ ಬಿ. ಇವರು 16 ತಿಂಗಳುಗಳ ಅನಧಿಕೃತ ಗೈರು ಹಾಜರಿಯಾಗಿರುವ ಆರೋಪಕ್ಕೆ ಸಂವಾದಿಯಾಗಿ ಕಾಲಿಕ ವೇತನ ಶ್ರೇಣಿಯಲ್ಲಿ ಕೆಳಗಿನ ಹಂತಕ್ಕೆ 05 ವರ್ಷದ ಅವಧಿಗೆ ವೇತನವನ್ನು ಇಳಿಸುವ ದಂಡನೆಯನ್ನು ವಿಧಿಸಿ, ಸೇವೆಗೆ ಪುನರ್ ನೇಮಕ ಮಾಡಿ ಸ್ಥಳ ನಿಯುಕ್ತಿಗೊಳಿಸಲು ಆದೇಶಿಸಲಾಗಿದೆ. ಅದರಂತೆ ಕೌನ್ಸಿಲಿಂಗ್ ನಡೆದಿದ್ದು, ಬೈಂದೂರು ತಾಲೂಕಿನ ಹಕ್ಲಾಡಿ ಪ್ರೌಢ ಶಾಲೆಗೆ ನಿಯುಕ್ತಿಗೊಂಡಿದ್ದಾರೆ ಎಂದು ತಿಳಿದು ಬಂದಿದೆ.