ಗೋಳಿಹೊಳೆ : ಟಿಪ್ಪರ್ ಕಂದಕಕ್ಕೆ ಬಿದ್ದು ಚಾಲಕ ಸಾವು, ಇಬ್ಬರಿಗೆ ಗಾಯ
ಕುಂದಾಪುರ: ಮಣ್ಣು ಸಾಗಾಟದ್ದೆನ್ನಲಾದ ಟಿಪ್ಪರ್ ಒಂದು ನಿಯಂತ್ರಣ ಕಳೆದಕೊಂಡು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಹುಣಚನಿ ಜನ್ಮನೆ ಎಂಬಲ್ಲಿ ತಿರುವು ಇಳಿಜಾರು ರಸ್ತೆಯಲ್ಲಿ ನಡೆದಿದೆ. ಮೃತ ಚಾಲಕನನ್ನು ಚಂದ್ರ ಎಂದು ಗುರುತಿಸಲಾಗಿದೆ.



ಗುರುವಾರ ವಿಜಯ ಎಂಬುವರು ಟಿಪ್ಪರಿನಲ್ಲಿ ತಮ್ಮ ಸಂಬಂಧಿ ಪ್ರದೀಪ್ ಎಂಬುವರ ತೋಟಕ್ಕೆ ಮಣ್ಣು ಹಾಕಲು ಕಾರ್ಮಿಕರಾದ ಮಹಾಬಲ, ಹನುಮಂತನನ್ನು ಕರೆದುಕೊಂಡು ಕಾಲ್ತೊಡು ಕಡೆಯಿಂದ ಎಲ್ಲೂರಿಗೆ ಹೋಗುತ್ತಿದ್ದರು. ಗೋಳಿಹೊಳೆ ಗ್ರಾಮದ ಹುಣಚನಿ ಜನ್ಮನೆ ಎಂಬಲ್ಲಿ ತಿರುವು ಇಳಿಜಾರು ರಸ್ತೆಯಲ್ಲಿ ಟಿಪ್ಪರ್ ನಿಯಂತ್ರಣ ಕಳೆದುಕೊಂಡು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಟಿಪ್ಪರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕ ಟಿಪ್ಪರ್ ಒಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಟಿಪ್ಪರ್ ನಲ್ಲಿದ್ದ ಮಹಾಬಲ ಹಾಗೂ ಹನುಮಂತ ಗಂಭೀರ ಗಾಯಗೊಂಡು ಕುಂದಾಪುರದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.