ಬ್ರಹ್ಮಾವರ: ಹೊರಜಿಲ್ಲೆಯಿಂದ ಮರಳು ಸಾಗಾಟ – ಚಾಲಕ ಸಹಿತ ಮರಳು, ಟಿಪ್ಪರ್ ವಶಕ್ಕೆ
ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗುರುಪುರದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ನ್ನು ಬ್ರಹ್ಮಾವರ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಬೆಳಿಗ್ಗೆ 9.15ರ ಸುಮಾರಿಗೆ ಹೇರಿಂಜೆ ಎಂಬಲ್ಲಿರುವ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ರಸ್ತೆಯಲ್ಲಿ ಪೇತ್ರಿ ಕಡೆಯಿಂದ ಹೇರೂರು ಕಡೆಗೆ KA-52-9030 ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ಮರಳು ತುಂಬಿಕೊಂಡು ಹೋಗುತ್ತಿರುವುದನ್ನು ನೋಡಿದ ಬ್ರಹ್ಮಾವರ ಎಎಸೈ ಶಾಂತರಾಜ್ ಅನುಮಾನಗೊಂಡು ಟಿಪ್ಪರನ್ನು ತಡೆದಿದ್ದಾರೆ. ಈ ಸಂದರ್ಭ ವಿಚಾರಿಸಿದಾಗ ಕಾರ್ಕಳದ ಶಾಹಿದ್ ಶೇಖ್ ಮಾಲಿಕತ್ವದ ಟಿಪ್ಪರ್ನಲ್ಲಿ ಅಕ್ಷಯ್ ಎಂಬವರು ಅಂದಾಜು ರೂ. 15 ಸಾವಿರ ಮೌಲ್ಯದ 3 ಟನ್ ನಷ್ಟು ಮರಳನ್ನು ಮಂಗಳೂರಿನ ಗುರುಪುರದಿಂದ ಲೋಡ್ ಮಾಡಿಕೊಂಡು ಬಂದಿರುವುದು ಬೆಳಕಿಗೆ ಬಂದಿದೆ. ಮರಳನ್ನು ಸಾಗಿಸಲು ಯಾವುದೇ ಪರವಾನಿಗೆಯನ್ನು ಹೊಂದದೇ ಕದ್ದು ಸಾಗಾಟ ಮಾಡಿ ಲಘು ಸಂಘಟಿತ ಅಪರಾಥವೆಸಗಿದ್ದಾರೆ ಎಂದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.