ಹಟ್ಟಿಯಂಗಡಿ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ರಾಷ್ಟ್ರೀಯ ಗ್ರೀನ್ ಸ್ಕೂಲ್ ಅವಾರ್ಡ್
ಕುಂದಾಪುರ: ಪರಿಸರ ಸ್ನೇಹಿ ಕಾರ್ಯಕ್ರಮಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಸೆಂಟರ್ ಫಾರ್ ಸೈನ್ಸ್ ಮತ್ತು ಎನ್ವಿರಾನ್ಮೆಂಟ್ (ಸಿಎಸ್ಇ) ನೀಡುತ್ತಿರುವ ರಾಷ್ಟ್ರೀಯ ಗ್ರೀನ್ ಸ್ಕೂಲ್ ಅವಾರ್ಡ್ ದೊರಕಿದೆ. ಸುಮಾರು 9 ಸಾವಿರ ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಫೆಬ್ರುವರಿ 4ರಂದು ದೆಹಲಿಯ ಇಂಡಿಯನ್ ಹೆಬಿಟ್ಯಾಟ್ನ ಸ್ಟೈನ್ ಅಡಿಟೋರಿಯಂನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೆಂಟರ್ ಫಾರ್ ಸೈನ್ಸ್ ಮತ್ತು ಎನ್ವಿರಾನ್ಮೆಂಟ್ (ಸಿಎಸ್ಇ) ನ ಮಹಾ ನಿರ್ದೇಶಕರಾದ ಸುನೀತಾ ನಾರಾಯಣ್ ಹಾಗೂ ಲಡಾಕ್ನ ಮುಖ್ಯ ಶಿಕ್ಷಣ ತಜ್ಞರು ಹಾಗೂ ಪರಿಸರವಾದಿಗಳಾದ ಸೋನಮ್ ವಾಂಗ್ಚಕ್ ಅವರು ಶಾಲೆಯ ಪ್ರಾಂಶುಪಾಲ ಶರಣ ಕುಮಾರ ಮತ್ತು ಶಾಲೆಯ ಆಡಳಿತಾಧಿಕಾರಿ ವೀಣಾರಶ್ಮಿ ಎಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಸಿದ್ಧಿವಿನಾಯಕ ಶಾಲೆಯು ನಾಲ್ಕನೇ ಬಾರಿಗೆ ಈ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದೆ. ಸಂಸ್ಥೆಯಲ್ಲಿರುವ ಸುಸಜ್ಜಿತ ವ್ಯವಸ್ಥೆಗಳೇ ಈ ಪ್ರಶಸ್ತಿ ಪಡೆಯುವಲ್ಲಿ ಪ್ರಧಾನ ಪಾತ್ರ ವಹಿಸಿವೆ. ನಮ್ಮ ಶಾಲೆಯಲ್ಲಿ ಅಳವಡಿಸಲಾಗಿರುವ ಸೋಲಾರ್ ಪವರ್ ಗ್ರಿಡ್ಗಳಿಂದ ಪ್ರಾಥಮಿಕ ಶಾಲೆಯ ಎಲ್ಲಾ ಕಾರ್ಯಚಟುವಟಿಕೆಗಳು ವ್ಯವಸ್ಥಿತವಾಗಿ ಸಾಗುತ್ತಿವೆ. ಮಳೆನೀರು ಕೊಯ್ಲಿನ ಮೂಲಕ ಮಳೆನೀರನ್ನು ಸಂಗ್ರಹಿಸಿ, ಅದು ಭೂಮಿಯೊಳಗೆ ಇಂಗುವಂತೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳೇ ಕೈದೋಟವನ್ನು ನಿರ್ಮಿಸಿದ್ದು, ಅಲ್ಲಿ ಬೆಳೆದಿರುವ ತರಕಾರಿಗಳನ್ನು ನಿತ್ಯದ ಅಡುಗೆಗೆ ಬಳಸಲಾಗುತ್ತಿದೆ. ನಮ್ಮಲ್ಲಿ ಸುವ್ಯವಸ್ಥಿತವಾಗಿ ಔಷಧಿಯ ಗಿಡಗಳನ್ನು ಬೆಳೆಸುತ್ತಿದ್ದು, ಅದಕ್ಕಾಗಿಯೇ ಪ್ರತ್ಯೇಕ ವನವನ್ನು ನಿರ್ಮಿಸಲಾಗಿದೆ. ಶೈಕ್ಷಣಿಕ ಚಟುವಟಿಕೆಗಳ ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತಾಗಿ ಮಾಹಿತಿ ಒದಗಿಸಿ, ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ. ಗ್ರೀನ್ ಸ್ಕೂಲ್ ಅವಾರ್ಡ್ ನಮ್ಮ ಶಾಲೆಗೆ ಸಂದ ಅತ್ಯುನ್ನತ ಗೌರವವಾಗಿದೆ ಎಂದು ಪ್ರಾಂಶುಪಾಲ ಶರಣ ಕುಮಾರ ಹೇಳಿದ್ದಾರೆ.