ಧರ್ಮೈಕ್ಯತೆ ಮೂಡಿಸುತ್ತಿರುವ ಯಕ್ಷಗಾನ ಕಲೆ – ಮುಸ್ಲಿಂ ಶಿಕ್ಷಕನ ಹನುಮಂತನ ಪಾತ್ರಕ್ಕೆ ವ್ಯಾಪಕ ಶ್ಲಾಘನೆ
ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಕೋಮು ಬಣ್ಣಗಳು ಬೆರಕೆಯಾಗುತ್ತಿರುವುದರ ನಡುವೆಯೇ ಒಂದಷ್ಟು ಜನ ದೇಶದ ಐಕ್ಯತೆಗಾಗಿ ತಮ್ಮದೇ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ನಿರಂತರವಾಗಿ ನಡೆಯುತ್ತಿವೆ. ಮೊನ್ನೆ ನಡೆದ ಮಹಾಕುಂಭ ಮೇಳದಲ್ಲಿ ಭಕ್ತರಿಗೆ ಆಶ್ರಯ ಒದಗಿಸುವ ಮೂಲಕ ಮುಸ್ಲಿಂ ಸಮಾಜ ಐಕ್ಯತೆಯ ಸಂದೇಶ ಸಾರಿದರೆ, ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಮುಸ್ಲಿಮರ ಕೊಡುಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಿಂದೂ ಪುರಾಣ ಗ್ರಂಥಗಳನ್ನು ಮುಸ್ಲಿಮರೂ ಹೆಚ್ಚು ಅರ್ಥೈಸಿಕೊಳ್ಳುತ್ತಿರುವುದಕ್ಕೆ ಹಲವಾರು ಊದಾಹರಣೆಗಳು ಕಾಣಸಿಗುತ್ತಿವೆ.
ಇದೆಲ್ಲದರ ನಡುವೆ ಯಕ್ಷಗಾನದಲ್ಲಿ ಮುಸ್ಲಿಂ ಪಾತ್ರದ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿರುವುದು ನಾವು ನೋಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಜಬ್ಬಾರ್ ಸಮೋ ಯಕ್ಷಗಾನ ತಾಳಮದ್ದಳೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕಲಾವಿದ. ಅವರ ಮಾತುಗಾರಿಕೆ ಸೋಲದ ಜನರಿಲ್ಲ. ಆರಂಭದಲ್ಲಿ ತಮ್ಮ ಸಮಾಜದಿಂದಲೇ ವಿರೋಧಗಳು ವ್ಯಕ್ತವಾದರೂ ಕೊನೆಗೆ ದಿಟ್ಟವಾಗಿ ಎದುರಿಸಿ ಸಾಧನೆಯ ಮೆಟ್ಟಿಲೇರಿದ ಜಬ್ಬಾರ್ ಈಗ ಮನೆ ಮಾತು.
ಇದೇ ತರಹದ ಇನ್ನೊಂದು ಪ್ರಸಂಗ ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಮುಸ್ಲಿಂ ಶಿಕ್ಷಕರೋರ್ವರು ಹನುಮಂತನ ವೇಷದಲ್ಲಿ ರಂಗಸ್ಥಳದಲ್ಲಿ ಹೆಜ್ಜೆ ಹಾಕುವ ಮೂಲಕ ಯಕ್ಷ ಅಭಿಮಾನಿಗಳನ್ನ ರಂಜಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಕುಂದಾಪುರ ತಾಲೂಕು ಹೆಸ್ಕುತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿರುವ ಅಬ್ದುಲ್ ರವೂಫ್ ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿರುವುದರ ಜೊತೆಗೆ ಯಕ್ಷಗಾನ ಕಲಾವಿದನಾಗಿ ಸಾಕಷ್ಟು ಹೆಸರು ಮಾಡಿದವರು. ಹವ್ಯಾಸಿ, ಯಕ್ಷಗಾನ ಸಂಘಗಳ ಪ್ರದರ್ಶನದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಬ್ದುಲ್ ರವುಫ್ ಅವರ ವೇಷ ಮತ್ತು ಅರ್ಥಗಾರಿಕೆ ಅದ್ಭುತ. ಸದ್ಯ ಬೈಂದೂರು ತಾಲೂಕಿನ ಶಿರೂರು ಶ್ರೀ ಮಹಾಸತಿ ಯುವಕ ಸಂಘದ ವತಿಯಿಂದ 25ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಆಯೋಜಿಸಲಾದ ಶರ ಸೇತು ಬಂಧನ ಯಕ್ಷಗಾನ ಪ್ರದರ್ಶನದಲ್ಲಿ ಶಿಕ್ಷಕ ಅಬ್ದುಲ್ ರವೂಫ್ ಅವರು ಹನುಮಂತನ ವೇಷ ಧರಿಸಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿ ರಂಜಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆಗಳ ಜೊತೆ ವೈರಲ್ ಆಗುತ್ತಿದೆ.