ನಿರಂತರ ಗೋವುಗಳ ರುಂಡ ಪತ್ತೆ : ಶಾಸಕ ಗಂಟಿಹೊಳೆಯಿಂದ ಪ್ರತಿಭಟನೆಯ ಎಚ್ಚರಿಕೆ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗೋ ಕಳ್ಳತನ, ಗೋ ಹತ್ಯೆ, ಗೋವುಗಳ ರುಂಡ ಪತ್ತೆಯಾಗುತ್ತಿರುವ ಪ್ರಕರಣಗಳು ಆಘಾತವುಂಟುಮಾಡುತ್ತಿದ್ದು, ಮುಂದಿನ ವಾರ ಇದರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಸಿದ್ದಾರೆ.
ಇದುವರೆಗೆ ಬೈಂದೂರು ಕ್ಷೇತ್ರವ್ಯಾಪ್ತಿಯಲ್ಲಿ 27 ಕಡೆಗಳಲ್ಲಿ ಗೋವಿನ ರುಂಡ ಪತ್ತೆಯಾಗಿದೆ. ಇಂತಹ ವಿಕೃತ ಮೆರೆಯುವವರಿಗೆ ಕಠಿಣ ಶಿಕ್ಷೆಯಾಗಬೇಕು. ಪೊಲೀಸರ ನಿರಂತರ ಪರಿಶ್ರಮದ ನಡುವೆಯೂ ಇಂತಹ ಘಟನೆಗಳು ನಡೆಯುತ್ತಿರುವುದನ್ನು ನಿಜಕ್ಕೂ ಆತಂಕ ಸೃಷ್ಟಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ರುಂಡ ಪತ್ತೆಯಂತಹಾ ಪ್ರಕರಣಗಳು ಶಿರೂರು ಭಾಗದಲ್ಲೇ ಅತಿ ಹೆಚ್ಚು ಕಂಡು ಬಂದಿದೆ. ಗೋವುಗಳ ಕಳ್ಳತನ, ಗೋಹತ್ಯೆ ಮಾಡಿ, ಗೋವಿನ ರುಂಡಗಳನ್ನು ಉದ್ದೇಶ ಪೂರ್ವಕವಾಗಿ ದೇವಸ್ಥಾನ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆದು ಹೋಗುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಮತ್ತು ಹಿಂದೂಗಳ ತಾಳ್ಮೆ ಕೆಡಿಸುವ ಪ್ರಯತ್ನವೂ ನಡೆಯುತ್ತಿದೆ ಎಂದಿದ್ದಾರೆ.