ಬಿಸಿಯೂಟ ನೌಕರರಿಂದ ಗೌರವ ಧನದ ಹೆಚ್ಚಳ, ರಜಾ ದಿನದ ಕೆಲಸಕ್ಕೆ ವಿಶೇಷ ವೇತನಕ್ಕೆ ಆಗ್ರಹ – ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ
ಬೈಂದೂರು: ಸರ್ಕಾರಿ ಶಾಲೆಗಳ ಬಿಸಿಯೂಟ ನೌಕರರಿಗೆ 3700 ರೂ. ಕನಿಷ್ಠ ಗೌರವ ಧನ ನೀಡಲಾಗುತ್ತಿದ್ದು, ರಜೆ ನೀಡುತ್ತಿಲ್ಲ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಉಚಿತವಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ರಜಾ ದಿನದ ಕೆಲಸಕ್ಕೆ ವಿಶೇಷ ಗೌರವಧನ ನೀಡಬೇಕು. ಅನಿವಾರ್ಯ ಸಂದರ್ಭದಲ್ಲಿ ರಜೆ ಪಡೆಯಲು ಅವಕಾಶ ನೀಡಬೇಕು ಮತ್ತು ಆ ದಿನದ ವೇತನ ಕಡಿತ ಮಾಡಬಾರದು, ಪಿಎಫ್ಐ, ಇಎಸ್ಐ ಸಹಿತ ವಿವಿಧ ಸೌಲಭ್ಯ ಒದಗಿಸಬೇಕು. ಮಾಸಿಕ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಬಿಸಿಯೂಟ ನೌಕರರು ಶನಿವಾರ ಬೈಂದೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮನವಿ ಸ್ವೀಕರಿಸಿದರು. ಬಳಿಕ ಸ್ಥಳದಲ್ಲಿಯೇ ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಬಿಸಿಯೂಟ ನೌಕರರ ಸಮಸ್ಯೆಗೆ ಪರಿಹಾರ ನೀಡುವ ಸಂಬಂಧ ಸೂಚನೆ ನೀಡಿದರು. ನಂತರ ಮಾತನಾಡಿ, ಬಿಸಿಯೂಟ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಅವರೊಂದಿಗೆ ಸದಾ ನಿಲ್ಲುತ್ತೇನೆ. ನಿಮ್ಮ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ನಿಮ್ಮ ಎಲ್ಲ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.