ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ಸುಸಜ್ಜಿತ ಅಗ್ರಿಮಾಲ್ ನಿರ್ಮಾಣ – ಪ್ರಕಾಶ್ಚಂದ್ರ ಶೆಟ್ಟಿ

ಬೈಂದೂರು: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತ ಬಹುಮಹಡಿ ಕಟ್ಟಡದ ಮೂಲಕ ಒಂದೇ ಸೂರಿನಡಿ ಗೊಬ್ಬರದಿಂದ ಚಿನ್ನದವರೆಗೆ ಎಲ್ಲಾ ಸೌಲಭ್ಯಗಳು, ಸರಕಾರಿ, ಧಾರ್ಮಿಕ ದತ್ತಿ ಹಾಗೂ ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುವ ಹಾಸ್ಟೇಲ್, ದೇವಸ್ಥಾನ, ಶಾಲೆಗಳಿಗೆ ಆಹಾರ ಸಾಮಾಗ್ರಿಗಳ ಪೂರೈಕೆಗಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಉಪ್ಪುಂದದಲ್ಲಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಒಟ್ಟು ರೂ. 20ಕೋಟಿ ವೆಚ್ಚದಲ್ಲಿ ಬೈಂದೂರು ತಾಲೂಕಿನಲ್ಲಿಯೇ ಎಸ್ಕುಲೇಟರ್ ಹೊಂದಿರುವ ಮೊದಲ ಬೃಹತ್ ವಾಣಿಜ್ಯ ಮಾರಾಟ ಮಳಿಗೆ ರೈತ ಸಹಕಾರಿ ನವೋದ್ಯಮ ರೈತಸಿರಿ ಅಗ್ರಿಮಾಲ್ ನಿರ್ಮಾಣಗೊಳ್ಳುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಉಪ್ಪುಂದದಲ್ಲಿರುವ ಸಂಘದ ಅಧಿಕೃತ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿದ ಅವರು, ಈ ಯೋಜನೆಯಡಿಯಲ್ಲಿ ವಿವಿಧ ಬಗೆಯ ಕೃಷಿ ಸರ್ವಿಸ್ ಸೆಂಟರ್ಗಳು, ಸೂಪರ್ ಮಾರ್ಕೇಟ್ಗಳು, ಬಡಗಿ, ಕಮ್ಮಾರಿಕೆ, ಗ್ಯಾರೇಜ್, ವೆಲ್ಡಿಂಗ್ ಶಾಪ್, ಇಲೆಕ್ಟಿಕಲ್ ಸರ್ವಿಸ್, ಫಾರ್ಮರ್ ಕ್ಲಬ್, ಕೃಷಿಕ ತರಬೇತಿ ಕೇಂದ್ರ, ಕೃಷಿ ಯಂತ್ರೋಪಕರಣಗಳ ಮಳಿಗೆ, ಉಪಹಾರ ಕೇಂದ್ರ, ಅಲ್ಲದೇ ಸಭಾಂಗಣ, ಎಸ್ಕುಲೇಟರ್, ಲಿಫ್ಟ್ ಹಾಗೂ ಸುತ್ತಲೂ ವಿಶಾಲವಾದ ಪಾರ್ಕಿಂಗ್ ಮಾಡಲು ರ್ಯಾಂಪ್ನ ವ್ಯವಸ್ಥೆ ಇದೆ. ಮಳಿಗೆಯು ಒಟ್ಟು 32000/- ಚದರ ಅಡಿ ವಿಸ್ತೀರ್ಣ ಮತ್ತು 8000 ಚದರ ಅಡಿ ಟೆರೇಸ್ ಇದ್ದು 4 ಮಹಡಿಯ ವಿಶೇಷ ವಿನ್ಯಾಸ ಹೊಂದಿದೆ ಎಂದರು.
ಅಲ್ಲದೇ ಕ್ಯಾಂಪ್ಕೋ ಮಾದರಿಯಲ್ಲಿ ಅಡಿಕೆ, ತೆಂಗು, ಭತ್ತ, ನೆಲಗಡಲೆ ಹಾಗೂ ಕಾಡುತ್ಪತ್ತಿ ಇತ್ಯಾದಿ ಬೆಳೆಗಳನ್ನು ಖರೀಧಿಸಿ. ದಾಸ್ತಾನು ಮಾಡಿ, ಉತ್ತಮ ದರ ಹಾಗೂ ಮಾರುಕಟ್ಟೆ ಒದಗಿಸುವುದು, ರೈತ ಸದಸ್ಯರಿಗೆ ಎನ್.ಸಿ.ಎಸ್ ಮಿತಿಯಾಧರಿಸಿ, ಡೆಬಿಟ್ ಕಾರ್ಡ್ ಸೌಲಭ್ಯ , ಯುವಕ-ಯುವತಿಯವರಿಗೆ ಉದ್ಯೋಗ ಸೃಷ್ಟಿಸುವ ಉದ್ಧೇಶ ಹೊಂದಲಾಗಿದೆ ಎಂದ ಅವರು, ಈಗಾಗಲೇ 1.15 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ಎಂದರು. 2019ರ ಜೂನ್ 14ರಂದು ಸಂಘವು ನಿವೇಶನ ಖರೀದಿಸಿದ್ದು, ಮಂಡಳಿಯ ನಿರ್ದೇಶಕರಿಬ್ಬರು ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಅದೇ ಉಚ್ಛನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿದ್ದು, ಆಜ್ಞಾನುಸಾರ ಮುಂದಿನ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಕಟ್ಟಡದ ಒಟ್ಟೂ ಅಂದಾಜು ವೆಚ್ಚ 13ಕೋಟಿ ಆಗಲಿದೆ ಎಂದರು. ಸುದ್ಧಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಪೈ ಉಪಸ್ಥಿತರಿದ್ದರು.