ವಿದ್ಯಾರಣ್ಯ: ಎನ್.ಎಂ.ಎಂ.ಎಸ್ ಮೂಲಕ ಆರ್ಥಿಕ ಸಂಕಷ್ಟದ ವಿದ್ಯಾರ್ಥಿಗೂ ಶಿಕ್ಷಣ – ಚಂದ್ರನಾಯ್ಕ್
ಉಚಿತ ಎನ್. ಎಂ.ಎಂ.ಎಸ್. ಕಾರ್ಯಾಗಾರ ಉದ್ಘಾಟನೆ
ಕುಂದಾಪುರ: 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಬಡತನವನ್ನು ಹೊಂದಿರುವ ಪ್ರತಿಭಾನ್ವಿತ ಮಕ್ಕಳು ಬಡತನದ ಕಾರಣವಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ಎನ್. ಎಂ.ಎಂ.ಎಸ್.ಯೋಜನೆಯನ್ನು ಜಾರಿಗೆ ತಂದಿದ್ದು,ಇಂದು ಈ ಯೋಜನೆಯಿಂದ ಹಲವಾರು ಪ್ರತಿಭಾನ್ವಿತ ಮಕ್ಕಳು ಶಿಕ್ಷಣವನ್ನು ಮುಂದುವರಿಸಲು ಸಹಕಾರಿಯಾಗಿದೆ” ಎಂದು ಎನ್. ಎಂ.ಎಂ.ಎಸ್.ಜಿಲ್ಲಾ ನೋಡೆಲ್ ಆಗಿರುವ ಚಂದ್ರ ನಾಯ್ಕ್ ಹೇಳಿದರು.

ಅವರು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ, ಕರ್ನಾಟಕ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಕುಂದಾಪುರ ತಾಲೂಕು ಘಟಕ ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ- ಮತ್ಯಾಡಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಆರು ವಾರಗಳ ಉಚಿತ ಎನ್. ಎಂ.ಎಂ.ಎಸ್.ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ “ಇಂತಹ ತರಬೇತಿಗಳನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಆಯ್ಕೆಯಾದಾಗ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕಲಿಕೆಗೆ ಪೂರಕವಾಗುವ ಹಲವಾರು ತರಬೇತಿಗಳನ್ನು ಪಡೆದುಕೊಂಡು ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆ ತೋರಿದಾಗ ಉತ್ತಮ ಭವಿಷ್ಯ ಕಾಣಲು ಸಾಧ್ಯ. ಸರ್ಕಾರದ ಇಂತಹ ಯೋಜನೆ ಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ನೆರವಾಗುತ್ತದೆ ಮತ್ತು ಯಶಸ್ವಿಗೆ ದಾರಿದೀವಿಗೆಯಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳು ಈ ಯೋಜನೆಯ ಲ ಪ್ರಯೋಜನ ಪಡೆಯಬೇಕು. ಮಕ್ಕಳ ಶ್ರೇಯೋಭಿವೃದ್ಧಿಗೆ ಸಹಾಯಕವಾಗುವ ಹತ್ತು ಹಲವು ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ಸದಾ ನೆರವು ನೀಡಲಿದೆ ಎಂದರು.

ಕುಂದಾಪುರ ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕುಂದಾಪುರದ E. C. O. ರಾಜಾ ಖಾರ್ವಿ, ಕುಂದಾಪುರ ಪ್ರೌಢ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶೇಖರ ಪೂಜಾರಿ, ಸರಕಾರಿ ಪ್ರೌಢ ಶಾಲೆ ಹೆಸ್ಕೂತ್ತೂರಿನ ಮುಖ್ಯ ಶಿಕ್ಷಕ ಅಬ್ದುಲ್ ರಹೂಫ್ ಉಪಸ್ಥಿತರಿದ್ದರು. ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ.ಸ್ವಾಗತಿಸಿ, ಕುಂದಾಪುರ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಅಜಯ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕ ಸಂತೋಷ ಕುಮಾರ್ ಕೋಟ ನಿರೂಪಿಸಿದರು.
