ಸಾಸ್ತಾನ: ಮುಂದಿನ ದಿನಗಳಲ್ಲಿ ಸಾಸ್ತಾನ ಟೋಲ್ ಗೆ ಮುಕ್ತಿ ಕಾಣಿಸಬೇಕಾಗುತ್ತದೆ – ಜಾಗೃತಿ ಸಮಿತಿ ಅಧ್ಯಕ್ಷ ಶಾಮಸುಂದರ್ ನಾಯರಿ ಎಚ್ಚರಿಕೆ
ಟೋಲ್ ಪ್ಲಾಝಾ ಎದುರು ಬೃಹತ್ ಪ್ರತಿಭಟನೆ

ಕುಂದಾಪುರ: ಕಳೆದ ಹತ್ತು ವರ್ಷಗಳಿಂದ ಒಂದಲ್ಲ ಒಂದು ಕಾರಣಕ್ಕೆ ಸ್ಥಳೀಯರಿಗೆ ತೊಂದರೆ ನೀಡುತ್ತಾ ಬಂದಿರುವ ಸಾಸ್ತಾನ ಟೋಲ್ ಪ್ಲಾಝಾ ಇದೇ ರೀತಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದರೆ ಮುಂದಿನ ದಿನಗಳಲ್ಲಿ ಟೋಲ್ ಪ್ಲಾಝಾಕ್ಕೆ ಮುಕ್ತಿ ಕಾಣಿಸಬೇಕಾಗುತ್ತದೆ ಎಂದು ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಎಚ್ಚರಿಕೆ ನೀಡಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಹೊಂಡಗುಂಡಿಗಳು, ಉರಿಯದೇ ಇರುವ ದಾರಿದೀಪಗಳು, ಶಾಲಾ ವಾಹನಗಳನ್ನು ತಡೆದು ನಿಲ್ಲಿಸುವುದು, ಶಾಲಾ ಮಕ್ಕಳಿಗೆ ಹಿಂಸೆ ನೀಡುತ್ತಿರುವುದು, ಸಾಮಾಜಿಕ ಸಂಸ್ಥೆಗಳಿಗೆ ವಿಧಿಸಲಾಗುತ್ತಿರುವ ಸುಂಕ ಹೀಗೇ ಹೆದ್ದಾರಿ ಅವ್ಯವಸ್ಥೆ ಹಾಗೂ ಸುಂಕ ವಸೂಲಾತಿಯ ವಿರುದ್ಧ ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಹೆದ್ದಾರಿ ಹೋರಾಟ ಸಮಿತಿಯ ವತಿಯಿಂದ ಸಾಸ್ತಾನ ಟೋಲ್ ಗೇಟ್ನಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಇದು ಕಂಪೆನಿ ಸರ್ಕಾರವಲ್ಲ. ಪ್ರಜಾಪ್ರಭುತ್ವ ಎನ್ನುವುದು ನೆನಪಿರಲಿ ಎಂದು ಆಕ್ರೋಶ ಹೊರಹಾಕಿದ ಅವರು, ಸ್ಥಳೀಯ ಜಿ.ಪಂನ ಎಲ್ಲಾ ವಾಹನಗಳಿಗೆ ಈ ಹಿಂದೆ ವಿನಾಯ್ತಿ ನೀಡಲಾಗಿತ್ತು. ಅದರಂತೆ ನಡೆದುಕೊಳ್ಳಲಿ, ರಸ್ತೆ ಕಾಲಕಾಲಕ್ಕೆ ಅನುಗುಣವಾಗಿ ಸಮರ್ಪಕವಾಗಿ ಹೆದ್ದಾರಿ ದುರಸ್ಥಿ ಮಾಡಬೇಕು, ದಾರಿದೀಪ ರಿಪೇರಿಯಾಗಬೇಕು, ಸಮರ್ಪಕ ಸರ್ವಿಸ್ ರಸ್ತೆ ನಿರ್ಮಾಣ, ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆ ಆಗದಂತೆ ಕ್ರಮ, ರಸ್ತೆ ಬದಿ ಮಣ್ಣು ಹಾಕಿಸಿ, ಜನಸಾಮಾನ್ಯರಿಗೆ ಸಂಚರಿಸಲು ಯೋಗ್ಯಗೊಳಿಸಬೇಕು, ಟೋಲ್ ಪ್ಲಾಜಾ ಬಳಿ ಬಾರಿ ಗಾತ್ರದ ವಾಹನ ನಿಲ್ಲದಂತೆ ಕ್ರಮ ವಹಿಸುವುದು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.


ಟೋಲ್ ಕಂಪನಿಯ ಸಿಬ್ಬಂದಿಗಳ ಬೇಜವಾಬ್ದಾರಿ ಹೇಳಿಕೆಗೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಬ್ರಹಾವರ ಸರ್ಕಲ್ ಇನ್ ಸ್ಪೆಕ್ಟರ್ ದಿವಾಕರ್ ಮಧ್ಯಸ್ಥಿಕೆ ವಹಿಸಿ ಟೋಲ್ ಕಂಪನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು. ಸೋಮವಾರ ತಹಶಿಲ್ದಾರರ್ ಕಛೇರಿಯಲ್ಲಿ ಸಭೆ ಆಯೋಜಿಸಲು ತಿರ್ಮಾಸಿ ಹೆದ್ದಾರಿ ಸಮಿತಿಗೆ ತಿಳಿಸಿದರು.