ಮಹಾರಾಷ್ಟ್ರ :ಅಂತಾರಾಷ್ಟ್ರೀಯ ಮಾನವಾಧಿಕಾರ ಫೆಡರೇಶನ್ ನ ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರಾಗಿ ಪತ್ರಕರ್ತ ಯೋಗೇಶ್ ಪುತ್ರನ್ ಆಯ್ಕೆ.

ಮುಂಬೈ: ಅಂತಾರಾಷ್ಟ್ರೀಯ ಮಾನವಾಧಿಕಾರ ಫೆಡರೇಷನ್ ಮಹಾರಾಷ್ಟ್ರ ಇದರ ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮುಂಬೈಯ ಹಿರಿಯ ಪತ್ರಕರ್ತ ಯೋಗೇಶ್ ವಿ ಪುತ್ರನ್ ಆಯ್ಕೆಯಾಗಿದ್ದಾರೆ.
ಎಲ್ಲರಿಗೂ ನ್ಯಾಯವನ್ನು ಖಚಿತ ಪಡಿಸಿ, ಮಾನವ ಹಕ್ಕುಗಳಿಗೆ ಸರಿಯಾದ ಗೌರವ ನೀಡಿ, ಮಾನವ ಹಕ್ಕುಗಳ ರಕ್ಷಕರನ್ನು ರಕ್ಷಿಸುವ ಸರಕಾರೆತರ ಸಂಸ್ಥೆ ಅಂತಾರಾಷ್ಟ್ರೀಯ ಮಾನವಧಿಕಾರ ಫೆಡರೇಶನ್ ನಲ್ಲಿ ಕಳೆದ 2 ವರ್ಷಗಳಿಂದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಂಬಯಿಯ ಪ್ರಥಮ ದ್ರಶ್ಯ ವಾಹಿನಿ ಮುಂಬಯಿ ನ್ಯೂಸ್ ನಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಕಳೆದ 14 ವರ್ಷಗಳಿಂದ ದುಡಿಯುತ್ತಿರುವ ಯೋಗೇಶ್ ಪುತ್ರನ್ ಅವರು, ಮಹಾನಗರದ ಸಹಕಾರಿ ರಂಗದ ಮೊಗವೀರ ಬ್ಯಾಂಕ್ ನ ಉದ್ಯೋಗಿಯಾಗಿ 20 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದ ಬಳಿಕ ಮುಂಬೈಯ ಈ ಸಂಜೆ ಸುದ್ಧಿ, ಜನವಾಹಿನಿ, ಕರ್ನಾಟಕ ಮಲ್ಲ, ಉದಯವಾಣಿ, ದೆಹಲಿ ವಾರ್ತೆ, ಟೈಮ್ಸ್ ಅಪ್ ಕುಡ್ಲ (ತುಳು ) ಪತ್ರಿಕೆಗಳಲ್ಲಿ ದುಡಿದಿದ್ದು, ಮೂರು ದಶಕಗಳಿಂದ ಪತ್ರಿಕಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ಪೂರ್ಣ ಪ್ರಮಾಣದಲ್ಲಿ ಮುಂಬಯಿ ನ್ಯೂಸ್ ನಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಯೋಗೇಶ್ ಪುತ್ರನ್ ಅವರು ಮೊಗವೀರ ವ್ಯವಸ್ಥಾಪಕ ಮಂಡಳಿಯ ಸದಸ್ಯನಾಗಿ, ಕರ್ನಾಟಕ ಸಂಘ ಮಾಟುಂಗ, ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ, ಕನ್ನಡಿಗ ಕಲಾವಿದ ರ ಪರಿಷತ್ ಮಹಾರಾಷ್ಟ್ರ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ, ವಸಯಿ ಕರ್ನಾಟಕ ಸಂಘ, ವಸಯಿ ತಾಲೂಕ ಮೊಗವೀರ ಸಂಘ, ಮುಂಬೈ ಫೋಟೋಗ್ರಾಪರ್ಸ್ ಎಸೋಸಿಯೇಷನ್, ಆಲ್ ಇಂಡಿಯಾ ಮೀಡಿಯಾ ಎಸೋಸಿಯೇಷನ್ ನ ಸದಸ್ಯರಾಗಿ ಸಕ್ರಿಯರಾಗಿದ್ದಾರೆ. ಯೋಗೇಶ್ ಪುತ್ರನ್ ಅವರ ಧೀರ್ಘಕಾಲದ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಾನವಾಧಿಕಾರ ಫೆಡರೇಶನ್ ಸಂಸ್ಥೆ ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿದೆ.