*ಸಾಹಿತಿಗಳಿಗೆ ಮಾನಸಿಕ ಸ್ಥಿರತೆ, ಸದೃಢ ಮನಸ್ಥಿತಿ ಇರಬೇಕು – ಬಿ.ಎಸ್.ಸುರೇಶ್ ಶೆಟ್ಟಿ*
*ಬೈಂದೂರು ಉತ್ಸವದಲ್ಲಿ ಸಾಹಿತ್ಯ ಸಂಚಯ ಗೋಷ್ಟಿಗಳ ಉದ್ಘಾಟನೆ*

ಬೈಂದೂರು: ಸಾಹಿತಿಗಳ ಮಾನಸಿಕ ಸ್ಥಿರತೆ ಹಾಗೂ ಸದೃಢ ಮನಸ್ಥಿತಿಯಿಂದ ಸಮಾಜದ ಆಗು ಹೋಗುಗಳ ಮೇಲೆ ದಿಟ್ಟವಾಗಿ ಬರೆಯಲು ಸಾಧ್ಯವಾಗುತ್ತದೆ. ರಾಜಕಾರಣಿಗಳಾದರೂ ಕೆಸರು ಗದ್ದೆಯಲ್ಲಿ ಹುಗಿದ ಗೂಟದಂತೆ ಅಸ್ಥಿರ ಮನಸ್ಥಿತಿ ಹೊಂದಿರುತ್ತಾರೆ ಎಂದು ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಹೇಳಿದರು. ಅವರು ಬೈಂದೂರು ಉತ್ಸವದ ಎರಡನೇ ದಿನವಾದ ಶನಿವಾರ ಬೆಳಿಗ್ಗೆ ಉತ್ಸವದ ಉಪವೇದಿಕೆ ಮೊಗೇರಿ ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಬೈಂದೂರು ಸಾಹಿತ್ಯ ಸಂಚಯ ವಿಚಾರ ಗೋಷ್ಟಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ವ ಗೋಷ್ಟಿಗಳ ಅಧ್ಯಕ್ಷತೆವಹಿಸಿದ್ದ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಪ್ರಾದ್ಯಾಪಕಿ ಶುಭಾ ಮರವಂತೆ ಮಾತನಾಡಿ, ಕುಂದಾಪ್ರದ ಭಾಷೆ ಬಹಳ ಚಂದ. ಅತೀ ವೇಗದ ಭಾಷೆಯಾಗಿರುವ ಕುಂದಾಪ್ರ ಕನ್ನಡ ಜಗತ್ತಿನ ಮೂಲೆ ಮೂಲೆಗಳ ಜನರನ್ನು ಅಷ್ಟೇ ವೇಗವಾಗಿ ಆಕರ್ಷಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಕುಂದಾಪ್ರ ಭಾಷೆ ಮಹತ್ತರ ಕೊಡುಗೆ ನೀಡಿದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಾಸ್ತಾವಿಸಿದರು. ಖಂಬದಕೋಣೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯ ವಿಶ್ವೇಶ್ವರ ಅಡಿಗ ಉದ್ಘಾಟಿಸಿದರು. ಸಹಸಂಚಾಲಕ ಗಣೇಶ್ ಗಾಣಿಗ ಉಪ್ಪುಂದ ಸಾಹಿತಿಗಳಾದ ಗುರುಪ್ರಸಾದ್ ಶೆಟ್ಟಿ ಯಡೇರಿ, ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.