ಕಡಬ: ಸ್ಕೂಟರ್ ಮೇಲೆ ಬೃಹತ್ ಮರ ಬಿದ್ದು ಸವಾರ ಸಾವು! – ಹೆದ್ದಾರಿ, ವಿದ್ಯುತ್ ಬಂದ್

ಪುಳಿಕುಕ್ಕು: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವನನ್ನಪ್ಪಿದ ಘಟನೆ ಇಂದು ನವೆಂಬರ್ 2ರ ಶನಿವಾರ ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ -ಪಂಜ ರಸ್ತೆಯ ಕೋಡಿಂಬಾಳ ಸಮೀಪ ಪುಳಿಕುಕ್ಕು ಎಂಬಲ್ಲಿ ನಡೆದಿದೆ. ಎಡಮಂಗಲ ಸಿ. ಎ. ಬ್ಯಾಂಕ್ ನ ಪಿಗ್ಮಿ ಸಂಗ್ರಾಹಕ ಸೀತಾರಾಮ ಗೌಡ (58) ಸ್ಧಳದಲ್ಲೇ ಮೃತ ದುರ್ದೈವಿ.

ಮೃತ ದೇವಸ್ಯ ಸೀತಾರಾಮ ಗೌಡ (56) ಅವರು ಸುಮಾರು 20 ವರ್ಷಗಳಿಂದ ಎಡಮಂಗಲ ಸೊಸೈಟಿಯಲ್ಲಿ ಪಿಗ್ಗಿ ಸಂಗ್ರಹಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮನೆಯಲ್ಲಿ ದೀಪಾವಳಿ ಪ್ರಯುಕ್ತ ದೈವದ ಹರಕೆಗೆ ಕಡಬ ಪೇಟೆಯಿಂದ ಕೋಳಿ ಖರೀದಿಸಿ ವಾಪಾಸ್ಸು ಮನೆಗೆ ಹಿಂತಿರುಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಬೃಹತ್ ಮರ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ತುಂಡಾಗಿ ತುಂಡಾಗಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೇ ಕಡಬ – ಪಂಜ ರಸ್ತೆ ಸಂಚಾರ ಬಂದ್ ಆಗಿದೆ. ಸಧ್ಯ ವಾಹನಗಳು ಎಡಮಂಗಲಕ್ಕೆ ಬಂದು ಪಾಲೊಳಿ ಮೂಲಕ ಕಡಬಕ್ಕೆ ಹೋಗುತ್ತಿದ್ದಾರೆ.
ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಕಡಬ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸೀತಾರಾಮ ಗೌಡರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.