ಒತ್ತಿನೆಣೆ: ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ ಪಲ್ಟಿ – ಚಾಲಕ ಸಾವು

ಕುಂದಾಪುರ: ಐಆರ್ಬಿ ಕಾಮಗಾರಿ ನಿರ್ವಹಿಸಿದ ಭಟ್ಕಳ ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಪರಿಣಾಮ ಲಾರಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಬೈಂದೂರು ಸಮೀಪದ ಒತ್ತಿನೆಣೆ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಲಾರಿ ಚಾಲಕನನ್ನು ಜಾರ್ಖಂಡ್ ಮೂಲದ ದಾಮೋದರ ಯಾದವ್ (55) ಎಂದು ಗುರುತಿಸಲಾಗಿದೆ.
ದಾಮೋದರ್ ಯಾದವ್ ಸಿಮೆಂಟ್ ತುಂಬಿದ ಲಾರಿಯನ್ನು ಲೋಕಾಪುರದಿಂದ ಮಂಗಳೂರಿಗೆ ಚಲಾಯಿಸುತ್ತಿದ್ದರು. ಒತ್ತಿನೆಣೆ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ಲಾರಿ ಅತೀ ವೇಗದಲ್ಲಿ ಚಲಿಸಿ ಬಲಬದಿಯ ರಸ್ತೆಗೆ ಹಾರಿ ಪಕ್ಕದ ಚರಂಡಿಗೆ ಪಲ್ಟಿಯಾಗಿ ಬಿದ್ದಿದೆ. ಈ ಸಂದರ್ಭ ಲಾರಿ ಚಾಲಕ ಲಾರಿಯಡಿಗೆ ಬಿದ್ದಿದ್ದಾನೆ.
ತಕ್ಷಣ ಸ್ಥಳೀಯರು ಹಾಗೂ ಹೆದ್ದಾರಿ ಪ್ರಯಾಣಿಕರು, ಐಆರ್ ಬಿ ಗೆ ಮಾಹಿತಿ ನೀಡಿ ಪೊಲೀಸ್ ನೇತೃತ್ವದಲ್ಲಿ ಕ್ರೇನ್ ಮೂಲಕ ಲಾರಿಯಡಿಗೆ ಬಿದ್ದಿದ್ದ ಚಾಲಕನನ್ನು ಮೇಲೆತ್ತಲಾಯಿತು. ಗಂಭೀರ ಗಾಯಗೊಂಡಿದ್ದ ಆತನನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ, ಆತ ಮೃತಪಟ್ಟಿರುವುದು ತಿಳಿದು ಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.