ಕುಂದಾಪುರ: ಅಕ್ಟೋಬರ್ 26 – ಸಾಧನಾ ಕಲಾಸಂಗಮದಿಂದ ತ್ರಿಮಧುರ ಕಾರ್ಯಕ್ರಮ
ಕುಂದಾಫುರ: ಇಲ್ಲಿನ ಕಲಾ ಸಂಸ್ಥೆಯಾಗಿರುವ ಸಾಧನ ಕಲಾ ಸಂಗಮ (ರಿ), ಅಪ್ರಮೇಯ (ರಿ) ಹಾಗೂ ಪರಪಂಚ (ರಿ.), ಕುಂದಾಪುರ ಸಂಸ್ಥೆಗಳು ಜಂಟಿಯಾಗಿ ಇದೇ ಅಕ್ಟೋಬರ್ 26ರ ಶನಿವಾರ “ತ್ರಿಮಧುರ” ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಸಾಧನ ಕಲಾ ಸಂಗಮ ಸಂಸ್ಥೆಯ ವಿಶ್ವಸ್ಥ ನಾರಾಯಣ ಐತಾಳ್ ತಿಳಿಸಿದ್ದಾರೆ.

ಅಕ್ಟೋಬರ್ 26ರಂದು ಶನಿವಾರ ಸಂಜೆ ಬೆಳಿಗ್ಗೆ 10 ಗಂಟೆಗೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಪರಪಂಚ ವಿದ್ಯಾರ್ಥಿಗಳಿಂದ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಖ್ಯಾತ ಕಲಾವಿದ ಮತ್ತು ಕುಮದಾಪುರ ಕನ್ನಡ ನಿಘಂಟು ಸಂಪಾದಕ ಪಂಜು ಗಂಗೊಳ್ಳಿ ಉದ್ಘಾಟಿಸಲಿದ್ದಾರೆ. ಕಲಾ ಶಿಕ್ಷಕಿ, ಪರಪಂಚ ಸಂಸ್ಥೆಯ ಮುಖ್ಯಸ್ಥೆ ವಿಜೇತಾ ಗಂಗೊಳ್ಳಿ ಈ ಕಾರ್ಯಕ್ರಮದ ಸಂಯೋಜಕಿಯಾಗಿದ್ದು, ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಇಡೀ ದಿನ ನಡೆಯಲಿದೆ.
ಸಂಜೆ 3 ಗಂಟೆಯಿಂದ ಸಾಧನ ಕಲಾ ವಿದ್ಯಾರ್ಥಿಗಳಿಂದ ಮಾಲಿನಿ ರಮೇಶ ಸಂಯೋಜನೆಯಲ್ಲಿ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ ನಾಲ್ಕು ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕಲಹಾಳ್, ಖ್ಯಾತ ಕಲಾವಿದರೂ ಅಂಕಣಕಾರರೂ ಆಗಿರುವ ಶ್ರೀ ದಿನಮಣಿ ಶಾಸ್ತ್ರಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಧನಾ ವಿದ್ಯಾರ್ಥಿಗಳಿಂದ ಭರತನಾಟ್ಯ ವಿದುಷಿ ವಿ ಅರ್ಪಿತಾ ಹೆಗಡೆ ಸಂಯೋಜನೆಯಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ವಿಶ್ವಸ್ಥ ನಾರಾಯಣ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.