ಗಂಗೊಳ್ಳಿ: ಡುಪ್ಲಿಕೇಟ್ ನಂಬರ್ ಪ್ಲೇಟ್ ಬಳಸಿದ ಕಾರಿನಲ್ಲಿ ಗೋಕಳವಿಗೆ ವಿಫಲ ಯತ್ನ
ಕುಂದಾಪುರ: ಜಾನುವಾರುಗಳನ್ನು ಕಳವು ಮಾಡಲು ಗೋಕಳ್ಳರು ನಕಲಿ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಬಳಸುತ್ತಿದ್ದಾರೆಯೇ ಎನ್ನುವ ಅನುಮಾನ ಇದೀಗ ಕರಾವಳಿಯಲ್ಲಿ ಕಾಡಲಾರಂಭಿಸಿದೆ. ಅದಕ್ಕೆ ಊದಾಹರಣೆ ಎನ್ನುವಂತೆ ಗುರುವಾರ ಬೆಳಗ್ಗಿನ ಜಾವ ಗಂಗೊಳ್ಳಿ ಸಮೀಪದ ಗುಜ್ಜಾಡಿ ಗ್ರಾಮದ ನಾಯಕವಾಡಿ ಎಂಬಲ್ಲಿ ಗಂಗೊಳ್ಳಿ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ರಿಟ್ಸ್ ಕಾರೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಕಾರಿನ ನಂಬರ್ ಪ್ಲೇಟಿಗೂ ಚಾಸ್ಸೀ ನಂಬರ್ ಗೂ ತಾಳೆಯಾಗುತ್ತಿಲ್ಲ ಎನ್ನುವುದು ಸಾಬೀತಾಗಿದೆ.

ಗುಜ್ಜಾಡಿ ಗ್ರಾಮ ನಾಯಕವಾಡಿಯಲ್ಲಿರುವ ರಾಮ ದೇವಸ್ಥಾನದ ಹಾಲ್ನಲ್ಲಿ ಉಳಿದುಕೊಂಡಿರುವ ಡಿಎಆರ್ ಸ್ಟ್ರೈಕಿಂಕ್ ಫೇರ್ಸ್ನ ಸಿಬ್ಬಂದಿಗಳಾದ ರಾಜೇಶ್ ಮತ್ತು ಭರತ್ ಎಂಬುವರು ಸೆ.12ರಂದು ಬೆಳಗಿನ ಜಾವ 4.20 ಹೊತ್ತಿಗೆ ಮೂತ್ರ ವಿಸರ್ಜನೆಯ ಬಗ್ಗೆ ಹೊರಗೆ ಬಂದಾಗ ಹಾಲ್ನ ಬಳಿಯ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಒಂದು ಜಾನುವಾರುವನ್ನು ಹಿಡಿದು ಬಲವಂತವಾಗಿ ಎಳೆದುಕೊಂಡು ಹೋಗುತ್ತಿದ್ದರು. ಇದನ್ನು ಕಂಡು ಅನುಮಾನಗೊಂಡು ಪೊಲೀಸ್ ಸಿಬ್ಬಂದಿಗಳು ಅಲ್ಲಿಗೆ ಹೋಗಿದ್ದಾರೆ. ಪೊಲಿಸರು ಬರುತ್ತಿದ್ದಂತೆ ಡಿ ಗೋ ಕಳ್ಳರು ಜಾನುವಾರನ್ನು ಮತ್ತು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಗೋ ಕಳ್ಳರು ರಸ್ತೆ ಬಳಿ ನಿಲ್ಲಿಸಿದ್ದ ಬಿಳಿ ಬಣ್ಣದ ರಿಡ್ಜ್ ಕಾರನ್ನು ಪರಿಶೀಲಿಸಿದಾಗ ಕಾರಿನ ಹಿಂಬದಿಯ ಸೀಟು ತೆಗೆದಿದ್ದು ಕಾರಿನೊಳಗೆ ನೀಲಿ ಬಣ್ಣದ ಪ್ಲಾಸ್ಟಿಕ್ ಹಾಸಿ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಾಲುಗಳನ್ನು ಹಾಗೂ ಕುತ್ತಿಗೆಯನ್ನು ಕಟ್ಟಿರುವುದು ಕಂಡು ಬಂದಿದೆ. ಆರೋಪಿಗಳು ಮೂರು ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ತಂದು ಅದನ್ನು ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿ ತಂದಿದ್ದಾರೆ ಎನ್ನಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ ಹಾಗೂ ಗುಜ್ಜಾಡಿ ಭಾಗಗಳಲ್ಲಿ ನಿರಂತರವಾಗಿ ಗೋ ಕಳ್ಳತನ ಆಗುತ್ತಿದ್ದು, ಕಾರಿನ ನಂಬರ್ ಪ್ಲೇಟ್ ಬದಲಾಯಿಸಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಗಂಗೊಳ್ಳಿಯ ರಥಬೀದಿಯಲ್ಲಿ ಮೂರು ಬಾರಿ ಗೋ ಕಳ್ಳತನಕ್ಕೆ ಯತ್ನ ನಡೆದಿದ್ದರೆ, ಸಮುದ್ರ ತೀರದಲ್ಲಿ ಚೀಲದಲ್ಲಿ ಮೂರು ಜಾನುವಾರುವಿನ ಕಳೆಬರ ಪತ್ತೆಯಾಗಿತ್ತು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು. ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂಜಾವೇ ಉಡುಪಿ ಜಿಲ್ಲಾ ಸಂಚಾಲಕ ಶಂಕರ ಕೋಟ ತಿಳಿಸಿದ್ದಾರೆ.