ಸುಣ್ಣಾರಿ: ತಾಯಿಯೇ ಮೊದಲ ಶಿಕ್ಷಕಿ – ಪ್ರೊ. ಎಂ ಬಾಲಕೃಷ್ಣ ಶೆಟ್ಟಿ
ಸುಣ್ಣಾರಿ ಎಕ್ಸಲೆಂಟ್ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ ಸಂಪನ್ನ

ಕುಂದಾಪುರ : ತಾಯಿಯೇ ಮೊದಲ ಶಿಕ್ಷಕಿ. ನಾವು ಮೊದಲು ತಾಯಿಯನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಶಿಕ್ಷಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ಈ ದೇಶ ಸದೃಢವಾಗಬೇಕಾದರೆ ವಿದ್ಯಾರ್ಥಿಗಳನ್ನು ತಿದ್ದುವ ಶಿಕ್ಷಕರು ಪ್ರಾಮಾಣಿಕವಾಗಿರಬೇಕು. ಶಿಕ್ಷಕನಾದವನು ಶಿಲೆಯಲ್ಲಿ ಶಿಲ್ಪವನ್ನು ಹುಡುಕಬೇಕು. ಶತಮಾನಗಳ ಮುಂದಾಲೋಚನೆಯೊಂದಿಗೆ ಎಕ್ಸಲೆಂಟ್ ಕಾಲೇಜು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಕಟೀಲಿನ ವಿಶ್ರಾಂತ ಪ್ರಾಂಶುಪಾಲ ಪ್ರೋ. ಎಂ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ವತಿಯಿಂದ ಮಂಗಳವಾರ ಎಕ್ಸಲೆಂಟ್ ಕ್ಯಾಂಪಸ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ ಯುನಿಟ್ ಆಫ್ ಎಮ್.ಎಮ್ ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮಾತನಾಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಂಧ ಉತ್ತಮವಾದಾಗ ಯಶಸ್ಸು ಸಾಧ್ಯ. ಪ್ರೀತಿ ವಿಶ್ವಾಸಗಳೊಂದಿಗೆ ಮಾಡುವ ಪಾಠಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.

ಇದೇ ಸಂದರ್ಭ 2024-25ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಬೈಂದೂರು ವಲಯದ ಉಪ್ಪುಂದ ಸರ್ಕಾರಿ ಪ.ಪೂ ಕಾಲೇಜು (ಪ್ರೌಢ ವಿಭಾಗ)ದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಶೆಟ್ಟಿ, ಹೆರೆಂಜಾಲು ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಜಯಾನಂದ ಪಟಗಾರ, ಕುಂದಾಪುರ ವಲಯದ ಕೆ.ಪಿ.ಎಸ್ ಬಿದ್ಕಲ್ ಕಟ್ಟೆ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ , ಕುಂದಾಪುರ ವಲಯಲದ ಹಂಗಳೂರು ಸ.ಹಿ.ಪ್ರಾ.ಶಾಲೆಯ ಸೀತಾರಾಮ್ ಶೆಟ್ಟಿ, ಗೋಪಾಡಿ ಪಡು ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಶ್ರೀನಿವಾಸ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಜೊತೆಗೆ ರಾಷ್ಟ್ರಮಟ್ಟದ ಕರಾಠೆ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ ಅನೀಶ್ ಆರ್ ಶೆಟ್ಟಿಯನ್ನು ಸನ್ಮಾನಿಸಲಾಯಿತು.

ಹೊಂಬಾಡಿ ಮಂಡಾಡಿ ಪಂಚಾಯತ್ ನ ಉಪಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಶಿಕ್ಷಕ ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಸುಣ್ಣಾರಿ ಎಕ್ಸಲೆಂಟ್ ಹೈಸ್ಕೂಲ್ನ ಮುಖ್ಯೋಪಾಧ್ಯಾಯನಿ ಸರೋಜಿನಿ ಪಿ ಆಚಾರ್ಯ ವಂದಿಸಿದರು. ಪ್ರಸಿದ್ಧ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ಹಾಗೂ ಕಿರ್ಲೋಸ್ಕರ್ ಸತ್ಯನಾರಾಯಣ ಹಾಗೂ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.
