ಕುಂದಾಪುರ: ಟ್ಯಾಂಕರ್ ನಿಂದ ಆಯಿಲ್ ಸೋರಿಕೆ – ಹೆದ್ದಾರಿಯಲ್ಲಿ ಬಿದ್ದ ಬೈಕುಗಳು – ಸವಾರರು ಆಸ್ಪತ್ರೆಗೆ ದಾಖಲು
ಕುಂದಾಪುರ: ಗಣೇಶ ಹಬ್ಬದ ದಿನ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಿಸುತ್ತಿದ್ದ ಟ್ಯಾಂಕರ್ ನಿಂದ ತೀವ್ರವಾದ ತೈಲ ಸೋರಿಕೆಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಹಲವು ಬೈಕು ಸವಾರರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.





ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೆಕ್ಕಟ್ಟೆಯಿಂದ ತಲ್ಲೂರುವರೆಗೆ ಆಯಿಲ್ ಟ್ಯಾಂಕರ್ ನಿಂದ ಆಯಿಲ್ ಸೋರಿಕೆಯಾದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ಸವಾರರಿಗೆ ಆಯಿಲ್ ಬಿದ್ದಿರುವುದು ಗಮನಕ್ಕೆ ಬಾರದೆ ಅದರ ಮೇಲೆ ಚಲಿಸಿದ ಪರಿಣಾಮ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಮಾರು ಹದಿನೈದಕ್ಕೂ ಹೆಚ್ಚು ಬೈಕ್ ಗಳು ಸ್ಕಿಡ್ ಆಗಿ ಬಿದ್ದಿವೆ. ಪರಿಣಾಮವಾಗಿ ಆರೇಳು ಜನ ಸವಾರರು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಬಳಿಕ ಎಚ್ಚೆತ್ತುಕೊಂಡ ಸ್ಥಳೀಯರು ಹಾಗೂ ಪೊಲೀಸರು ಮತ್ತು ಅಗ್ನಿಶಾಮಕ ದಳ ತೆಕ್ಕಟ್ಟೆಯಿಂದ ಕುಂದಾಪುರದ ತಲ್ಲೂರುವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುವ ಹೆದ್ದಾರಿಯನ್ನು ಬಂದ್ ಮಾಡಿ ಆಯಿಲ್ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಪತಿಣಾಮ ಸಂಚಾರಕ್ಕಾಗಿ ತಲ್ಲೂರಿನಿಂದ ತೆಕ್ಕಟ್ಟೆ ಕಡೆಗೆ ಸಂಚರಿಸುವ ಏಕ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಬಿಟ್ಟುಕೊಡಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಆಯಿಲ್ ಚೆಲ್ಲಿರುವುದು ಆಯಿಲ್ ಟ್ಯಾಂಕರ್ ನ ಚಾಲಕನ ಗಮನಕ್ಕೂ ಬಂದಿಲ್ಲ ಎನ್ನಲಾಗುತ್ತಿದೆ. ಇದೀಗ ಘಟನೆಗೆ ಕಾರಣವಾದ ಲಾರಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಹೆಮ್ಮಾಡಿಯಲ್ಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡ ಬೈಕ್ ಚಾಲಕರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.