ಯೆಡ್ತೆರೆ: ವಿದೇಶೀ ಉದ್ಯೋಗವಕಾಶದಿಂದ ದೇಶದ ಅರ್ಥಿಕತೆ ಸದೃಢ – ಸಂಸದ ಬಿ.ವೈ.ರಾಘವೇಂದ್ರ

ಬೈಂದೂರು: ಯುವ ಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದೇಶೀ ಉದ್ಯೋಗ ಮೇಳದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಶೇಷ ತರಬೇತಿ, ಭಾಷೆ ಕೌಶಲ್ಯವನ್ನೂ ಕಲಿಸುವುದು ಶ್ಲಾಘನೀಯ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ಇದರ ವತಿಯಿಂದ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಅಂತಾರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಶನಿವಾರ ಬೈಂದೂರಿನ ಜೆ.ಎನ್. ಆರ್.ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಸೆಳೆಯುವುದು, ಕೈಗಾರಿಕೆ ಕೇಂದ್ರಗಳ ಸ್ಥಾಪನೆಗೆ ಪ್ರಯತ್ನವೂ ನಡೆಯುತ್ತಿದೆ. ತಕ್ಷಣ ನಮ್ಮ ಯುವಜನತೆಗೆ ಒಂದಿಷ್ಟು ಉದ್ಯೋಗ ಸೃಷ್ಟಿಸಿ ಕೊಡಲು ಈ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ಸಮೃದ್ಧ ಬೈಂದೂರು ಟ್ರಸ್ಟ್ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು ಮಾತನಾಡಿ, ಬೈಂದೂರಿನ ಒಂದು ತರಬೇತಿ ಕೇಂದ್ರ ಶೀಘ್ರ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅಜಿನೂರಾಹ ಸಂಸ್ಥೆಯ ಪ್ರತಿನಿಧಿಗಳು, ಉದ್ಯಮಿಗಳಾದ ವೆಂಕಟೇಶ ಕಿಣಿ, ಕೃಷ್ಣಪ್ರಸಾದ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಬೃಹತ್ ಉದ್ಯೋಗ ಮೇಳಕ್ಕೆ 8000ಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 600ಕ್ಕೂ ಅಧಿಕ ನರ್ಸಿಂಗ್ ಪದವೀಧರರು ಸೇರಿದಂತೆ ಇತರೆ ವಿಭಾಗದ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡರು. ಜಪಾನ್, ಮಲೇಷಿಯಾ, ಜರ್ಮನ್, ಕ್ರೋವೆಷಿಯಾ, ಗಲ್ಫ್ ರಾಷ್ಟ್ರಗಳ ವಿವಿಧ ಕಂಪೆನಿಗಳು ಭಾಗವಹಿಸಿದ್ದವು.