ಕೆಂಚನೂರು: ಗಾಳಿಗೆ ಮರ ಬಿದ್ದು ದನ ಮತ್ತು ಮಹಿಳೆ ಸಾವು
ಕುಂದಾಪುರ: ಭಾನುವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಹೆಂಗಸು ಇಬ್ಬರೂ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕೆಂಚನೂರು ನೀರಿನ ಟ್ಯಾಂಕಿ ಬಳಿ ಭಾನುವಾರ ಸಂಜೆ ಸುಮಾರು 5.30ಕ್ಕೆ ನಡೆದಿದೆ.


ಕೆಂಚನೂರು ಗ್ರಾಮದ ಮೈಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರಿ ಎಂಬುವರ ಪತ್ನಿ ಸುಜಾತ ಆಚಾರ್ತಿ (53) ಸಾವನ್ನಪ್ಪಿದವರು. ಅಲ್ಲದೆ ಅವರ ಮನೆಯ ಹಾಲು ಕರೆಯುವ ಹಸು ಕೂಡ ಸಾವನ್ನಪ್ಪಿದೆ.

ಸುಜಾತಾ ಆಚಾರ್ತಿ ತಮ್ಮ ಮನೆಯ ಹಾಲು ಕರೆಯುವ ಹಸುವನ್ನು ಮನೆ ಸಮೀಪದ ರಸ್ತೆ ಬದಿಯಲ್ಲಿ ಭಾನುವಾರ ಸಂಜೆ ಮೇಯಲೆಂದು ಕಟ್ಟಿದ್ದರು. ವಿಪರೀತ ಗಾಳಿ ಮಳೆ ಬೀಸುತ್ತಿರುವ ಹಿನ್ನೆಲೆಯಲ್ಲಿ ಸಂಜೆ ಸುಮಾರು 5.30ಕ್ಕೆ ದನವನ್ನು ಬಿಡಿಸಿ ಕೊಟ್ಟಿಗೆಗೆ ತರಲೆಂದು ಹೋಗಿದ್ದರು. ಇದೇ ಸಂದರ್ಭ ಗಾಳಿಗೆ ಮರ ನೇಯುತ್ತಿದ್ದ ದನ ಮತ್ತು ಸುಜಾತ ಆಚಾರ್ತಿ ಅವರ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ದನ ಸ್ಥಳದಲ್ಲಿಯೇ ಸಾವನ್ನಪ್ಪಿದೆ ಹಾಗೂ ಸುಜಾತ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಅಲ್ಲಿ ಸುಜಾತ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ದುರ್ಮರಣಕ್ಕೊಳಗಾದ ಸುಜಾತಾ ಆಚಾರ್ಯ ಅವರ ಪತಿ ಅಣ್ಣಪ್ಪಯ್ಯ ಆಚಾರಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

