ಗ್ರಾಮಸಂವಾದದ ಮೂಲಕ ಹಳ್ಳಿಗಳನ್ನು ತಲುಪುತ್ತಿರುವ ಶಾಸಕ ಗಂಟಿಹೊಳೆ
ಕುಂದಾಪುರ: ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿಯ ಹುಮ್ಮಸ್ಸಿದ್ದರೆ, ಜನರನ್ನು ಮುಟ್ಟುವ ತವಕವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದಾರೆ. ಅದಕ್ಕೆ ಒಳ್ಳೆಯ ಊದಾಹರಣೆ ಅವರ ಗ್ರಾಮ ಸಂವಾದ ಕಾರ್ಯಕ್ರಮ. ಪ್ರತೀವಾರ ಒಂದು ಗ್ರಾಮವನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆಗಳನ್ನು ಗ್ರಾಮಸ್ಥರ ಜೊತೆಗೇ ಆಲಿಸುವ ವಿಶೇಷ ಕಾರ್ಯಕ್ರಮವೇ ಈ ಗ್ರಾಮ ಸಂವಾದದ ಉದ್ದೇಶ ಎನ್ನುತ್ತಾರೆ ಗುರುರಾಜ್ ಗಂಟಿಹೊಳೆ.

ಕಳೆದ ವಾರ ಆರಂಭಗೊಂಡಿರುವ ಈ ಗ್ರಾಮಸಂವಾದದ ಎರಡನೇ ಸಭೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಕ್ಯಾರ್ತೂರ್ ನಲ್ಲಿ ನಡೆಯಿತು. ಶಾಸಕರು ಖುದ್ದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಗ್ರಾಮಸ್ಥರಿಂದಲೆ ಆಲಿಸಿದರು. ತನ್ನ ಕಾರ್ಯ ವ್ಯಾಪ್ತಿಯ ಅಧಿಕಾರ ಬಳಸಿ ಪರಿಹರಿಸಲಾಗುವ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಬಗೆಹರಿಸುವುದಾಗಿ ತಿಳಿಸಿದರು.



ಶಾಸಕ ಗುರುರಾಜ್ ಗಂಟಿಹೊಳೆಯವರ ಈ ಗ್ರಾಮಸಂವಾದದ ಯೋಚನೆ ಕೇವಲ ಪ್ರಚಾರಕ್ಕಾಗಿ ನಡೆಯದೇ ಅನುಷ್ಟಾನ ಸಾಧ್ಯವಾಗಲಿ. ಆ ಮೂಲಕ ಸುಸಜ್ಜಿತ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಜನಸೇವೆ ಮಾಡುವ ಜನಪ್ರತಿನಿಧಿಗಳಿಗೆ ಮಾದರಿ ಯೋಜನೆಯಾಗಲಿ. ಹಾಗೆಯೇ ರಾಜ್ಯದ ಎಲ್ಲಾ ಗ್ರಾಮೋದ್ಧಾರಗಳಿಗೆ ಪ್ರೇರಣೆಯಾಗಲಿ ಎನ್ನುವುದೇ ನಮ್ಮ ಆಶಯ.