ಸಾಲಿಗ್ರಾಮ: ಪತ್ನಿಗೆ ಮೊಬೈಲ್ ಹುಚ್ಚು! ಗಂಡ ಹೆಂಡತಿ ಜಗಳದಲ್ಲಿ ಪತ್ನಿ ಕೊಲೆ ಶಂಕೆ?!
ಕೋಟ: ಬೆಳ್ಳಂಬೆಳಿಗ್ಗೆ ಎದ್ದು ಗಂಡ ಹೆಂಡತಿ ಜಗಳವಾಡಿಕೊಂಡು ಗಲಾಟೆ ತಾರಕಕ್ಕೇರಿದ್ದಲ್ಲದೇ ಪತಿ ಪತ್ನಿಗೆ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿದ್ದಾರೆ ಎನ್ನಲಾದ ಘಟನೆ ಇಂದು ಶುಕ್ರವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಪಡುವಳಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಹಲ್ಲೆ ನಡೆಸಿದ್ದಾನೆನ್ನಲಾದ ಆರೋಪಿ ಪತಿಯನ್ನು ಬ್ರಹ್ಮಾವರ ತಾಲೂಕು ಸಾಸ್ತಾನ ಗುಂಡ್ಮಿ ನಿವಾಸಿ ಶ್ಯಾಮ್ ಉಪಾಧ್ಯಾಯ ಎಂಬುವರ ಪುತ್ರ ಕಿರಣ್ ಉಪಾಧ್ಯಾಯ (41) ಎಂದು ಗುರುತಿಸಲಾಗಿದೆ. ಕಿರಣನ ಪತ್ನಿ ಜಯಶ್ರೀ(32) ತಲೆಗೆ ಪೆಟ್ಟಾಗಿದ್ದು ಸಾವನ್ನಪ್ಪಿದ ದುರ್ದೈವಿ.



9 ತಿಂಗಳ ಹಿಂದಷ್ಟೇ ಕಿರಣ ಉಪಾಧ್ಯಾಯ ಹಾಗೂ ಬೀದರ್ ದೊಣಗಪುರ ಮೂಲದ ಜಯಶ್ರೀ ಎಂಬುವರ ವಿವಾಹವಾಗಿತ್ತೆನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಕಾರ್ಕಡ ಪಡುವಳಿಯ ಕಡಿದ ಹೆದ್ದಾರಿ ಎಂಬಲ್ಲಿ ಅಂಗನಾಡಿ ಸಮೀಪದ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಕಿರಣ್ ಉಪಾದ್ಯ ಕಳೆದ ಎರಡು ವರ್ಷಗಳಿಂದ ಗುರು ನರಸಿಂಹ ದೇವಸ್ಥಾನದಲ್ಲಿ ಅಡುಗೆಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ. ಜಯಶ್ರೀ ಮನೆಯಲ್ಲಿಯೇ ಇರುತ್ತಿದ್ದಳು. ಸ್ಥಳೀಯರ ಪ್ರಕಾರ, ಪತ್ನಿ ಜಯಶ್ರೀಗೆ ವಿಪರೀತ ಮೊಬೈಲ್ ಬಳಸುವ ಹುಚ್ಚಿತ್ತು. ಇದರಿಂದಾಗಿ ಪ್ರತೀ ದಿನ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು ಎನ್ನುತ್ತಿದ್ದಾರೆ. ಇದರಿಂದಲೇ ಪತಿ ಪತ್ನಿಗೆ ಹಲ್ಲೆ ನಡೆಸಿದ್ದಾಗ ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ. ಆದರೆ ಕೋಟ ಪೋಲೀಸರು ಆರೋಪಿಯನ್ನು ಬಂಧಿಸಿದ್ದು, ಪತ್ನಿ ತಾರಸಿಯಿಂದ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ಆರೋಪಿ ಕಿರಣ್ ಹೇಳುತ್ತಿದ್ದಾನೆ ಎನ್ನಲಾಗುತ್ತಿದೆ. ನಿಜವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಜಯಶ್ರೀ ಮೃತ ದೇಹವನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.