ಬೈಂದೂರು: ಧರಣಿಗೆ ವಿವಿಧ ಶಾಸಕರ ಬೆಂಬಲ – ಮಧ್ಯರಾತ್ರಿ ಆಗಮಿಸಿದ ಕಾಪು ಕುಂದಾಪುರ ಉಡುಪಿ ಶಾಸಕರು
ಕುಂದಾಪುರ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೋಮವಾರ ಸಂಜೆಯಿಂದ ಆರಂಭಿಸಿದ ಆಹೋರಾತ್ರಿ ಧರಣಿಗೆ ಉಡುಪಿ ಜಿಲ್ಲೆಯ ಕುಂದಾಪುರ, ಕಾಪು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋಮವಾರ ರಾತ್ರಿ ಬೈಂದೂರಿನ ತಾಲೂಕು ಕಚೇರಿ ಎದುರು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಆಗಮಿಸಿದ ಮೂವರು ಶಾಸಕರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದಿದ್ದಾರೆ.

ಜನಪ್ರತಿನಿಧಿಗಳಿಗೆ ಜನರ ಮೇಲಿರುವ ಕಾಳಜಿಯನ್ನು ಅರ್ಥಮಾಡಿಕೊಂಡು ಕ್ಷೇತ್ರದ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಬಿಟ್ಟು, ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಶಾಸಕರ ಮಾತಿಗೆ ಅಧಿಕಾರಿಗಳು ಗೌರವ ನೀಡದೆ ಇದ್ದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಎಷ್ಟು ಕಾಳಜಿ ತೋರಿಸಿಯಾರು? ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವ ತನಕ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.

ಬಿಜೆಪಿಯ ಹಿರಿಯ ಮುಖಂಡ ರಾಜೇಶ್ ಕಾವೇರಿ ಮಾತನಾಡಿ, ಶಾಸಕ ಗಂಟಿಹೊಳೆ ಜೊತೆಗೆ ಬಿಜೆಪಿಯ ಎಲ್ಲಾ ಕಾರ್ಯಕರ್ತರು, ಪದಾಧಿಕಾರಿಗಳು ನಿಲ್ಲುತ್ತಾರೆ. ಶಾಸಕರ ಹಕ್ಕುಚ್ಯುತಿ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ ಎಂದರು.

ರಾತ್ರಿಯಿಡಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಬೈಂದೂರಿನ ನೂರಾರು ಬಿಜೆಪಿ ಕಾರ್ಯಕರ್ತರು ಶಾಸಕ ಗುರುರಾಜ್ ಗಂಟಿ ಹೊಳೆ ಜೊತೆಗೆ ತಾತ್ ನೀಡಿದರು ಮುಂಭಾಗದಲ್ಲಿ ಚಾಪೆಹಾಸಿ ಮಲಗಿದರು ಪ್ರತಿಭಟನೆ ಇಂದು ಮುಂದುವರೆಯಲಿದೆ