ಹಿಲಿಯಾಣ: ಸರ್ಕಾರೀ ಕಟ್ಟಡ ಅಕ್ರಮ ತೆರವು – ಪಿಡಿಓ, ಗ್ರಾಮಾಡಳಿತ ಅಧಿಕಾರಿ ವಿರುದ್ಧ ಪೊಲೀಸ್ ದೂರು

ಕುಂದಾಪುರ: ಕಾನೂನು ಬಾಹಿರವಾಗಿ ಹಳೆಯ ಸರ್ಕಾರಿ ಕಟ್ಟಡವನ್ನು ಕೆಡವಿ ಸರ್ಕಾರಿ ಆಸ್ತಿಯನ್ನು ನಾಶ ಮಾಡಿ ಕಟ್ಟಡಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಕಂದಾಯ ಇಲಾಖೆಯ ವಿ.ಎ.ಓ ವಿರುದ್ಧ ಪೊಲೀಸ್ ದೂರು ನೀಡಿದ ಘಟನೆ ಬ್ರಹ್ಮಾವರ ತಾಲೂಕಿನ 11 ನೇ ಅವರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಲಿಯಾಣ ಗ್ರಾಮದ ಆಮ್ರಕಲ್ ಎಂಬಲ್ಲಿ ನಡೆದಿದೆ.
ಶಂಕರನಾರಾಯಣ ಠಾಣಾ ವ್ಯಾಪ್ತಿಯ ಹಿಲಿಯಾಣ ಗ್ರಾಮದ ಆಮ್ರಕಲ್ ಎಂಬಲ್ಲಿ 1980ರಲ್ಲಿ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ. ಕೇಂದ್ರ ಕಛೇರಿ ಕೊಕ್ಕರ್ಣೆ, ಹಾಗೂ ಕೃಷಿವಿನಿಮಯ ಕೇಂದ್ರ ಅವರ್ಸೆ, ಹಿಲಿಯಾಣ, ಕಕ್ಕುಂಜೆ ಇವರ ಜಂಟಿ ಸಹಭಾಗಿತ್ವದಲ್ಲಿ ಹಾಗೂ ಸಾರ್ವಜನಿಕರ ವಂತಿಗೆ ಹಣದಿಂದ ಸರ್ಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸಲು ಸರ್ಕಾರೀ ಭೂಮಿಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಕಟ್ಟಡ ನಿರ್ಮಿಸಲಾಗಿತ್ತು. 1993-94 ರಲ್ಲಿ ರಾಜ್ಯದ ಮಂಡಲ ಪಂಚಾಯತ್ಗಳು ಗ್ರಾಮ ಪಂಚಾಯತ್ಗಳಾಗಿ ಮರುನಾಮಕರಣ ಮಾಡಿದ ಬಳಿಕ ಪಂಚಾಯತ್ ವ್ಯಾಪ್ತಿಯ ಖಾಸಗಿ ಒಡೆತನಕ್ಕೆ ಸೇರದ ಅನ್ಯಸ್ಥಳೀಯ ಸಂಸ್ಥೆಗಳ ಮತ್ತು ಸರ್ಕಾರದ ನಿಯಂತ್ರಣ ಅಥವಾ ನಿರ್ವಹಣೆಗೆ ಒಳಪಡದ ಕಟ್ಟಡಗಳು, ಗ್ರಾಮರಸ್ತೆ, ಸೇತುವೆ, ಚರಂಡಿ, ಬಾವಿ, ಇತರ ಸಾರ್ವಜನಿಕ ಸ್ಥಳಗಳು ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು, ಇದೀಗ ಆಮ್ರಕಲ್ ಎಂಬಲ್ಲಿನ ಕಟ್ಟಡವನ್ನು ಕೆಲವರು ವೈಯುಕ್ತಿಕ ಹಿತಾಸಕ್ತಿಗೆ ಪಂಚಾಯತ್ ಹಾಗೂ ಕಮದಾಯ ಇಲಾಖೆಯ ಅನುಮತಿ ಪಡೆಯದೇ ಕೆಡವಿದ್ದಲ್ಲದೇ ಕಟ್ಟಡದ ಸೊತ್ತುಗಳನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಪಿಡಿಒ ಸೀತಾರಾಮ ಆಚಾರ್ಯ ಹಾಗೂ ಗ್ರಾಮ ಆಡಳಿತಾಧಿಕಾರಿ ವಿಜಯ ಶೆಟ್ಟಿಯವರಿಗೆ ದೂರು ನೀಡಿದ್ದರೂ ಅಧಿಕಾರಿಗಳು ಆರೋಪಿತರ ರಕ್ಷಣೆಗೆ ನಿಂತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ಆವರ್ಸೆ ಶಂಕರನಾರಾಯಣ ಪೊಲೀಸರಿಗೆ ದೂರು ನೀಡಿದ್ದಾರೆ.