ದೆಹಲಿ: ಮರವಂತೆ ಹೊರಬಂದರು ಕಾಮಗಾರಿ ವಿಚಾರ – ಕೇಂದ್ರ ನಿರ್ದೇಶಕರನ್ನು ಭೇಟಿ ಮಾಡಿದ ಶಾಸಕ ಗಂಟಿಹೊಳೆ
ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ವ್ಯಾಪ್ತಿಯ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿಗೆ ರೂ 85 ಕೋಟಿ ಮಂಜೂರಾಗಿದ್ದು, ಸಿ.ಆರ್.ಝೆಡ್ ಕ್ಲಿಯರೆನ್ಸ್ ಮಾಡುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕೇಂದ್ರ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ಶ್ರೀ ಹೇಮಂತ್ ಅವರನ್ನು ಮನವಿ ಮಾಡಿದರು.
ಅವರು ಇಲಾಖೆಯ ನಿರ್ದೇಶಕ ಹೇಮಂತ್ ಅವರನ್ನು ದೆಹಲಿಯ ಕೇಂದ್ರ ಮೀನುಗಾರಿಕಾ ಇಲಾಖೆ ಕಚೇರಿಯಲ್ಲಿ ಜುಲೈ 1ರಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ಸಂದರ್ಭ ಗಂಗೊಳ್ಳಿ ಬಂದರು ಆಧುನಿಕರಣ, ಗಂಗೊಳ್ಳಿ ಕೋಸ್ಟಲ್ ಬರ್ತ್, ಕೊಡೇರಿ ಕಿರುಬಂದರು ಅಭಿವೃದ್ಧಿ, ಶಿರೂರು ಕಿರುಬಂದರು ಅಭಿವೃದ್ಧಿ , ಉಪ್ಪುಂದದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಬ್ರೇಕ್ ವಾಟರ್ ಹಾಗೂ ಕಿರುಬಂದರು ನಿರ್ಮಾಣದ ಕುರಿತು ಚರ್ಚಿಸಿದರು. ಬಳಿಕ ಪ್ರತಿಕ್ರಿಯಿಸಿದ ಇಲಾಖೆ ನಿರ್ದೇಶಕ ಹೇಮಂತ್, ತಕ್ಷಣ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವುದಾಗಿ ಶಾಸಕರ ಕಚೇರಿ ತಿಳಿಸಿದೆ. ಈ ಸಂದರ್ಭ ಸಮೃದ್ಧ ಬೈಂದೂರು ನಿಯೋಗ ಹಾಗೂ ಸಂಸದರ ದೆಹಲಿ ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.