ಕುಂದಾಪುರ: ಆಗಸ್ಟ್ 4ರಂದು ಕಲಾಕ್ಷೇತ್ರದಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಕುಂದಾಪುರ: ಆಗಸ್ಟ್ 4ರಂದು ಆಸಾಡಿ ಅಮಾಸೆಯಂದು ಕಲಾಕ್ಷೇತ್ರ–ಕುಂದಾಪುರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಸಂಜೆ 3.30ಕ್ಕೆ ಪ್ರಾರಂಭವಾಗಲಿದೆ ಎಂದು ಕಲಾಕ್ಷೇತ್ರ–ಕುಂದಾಪುರ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಧ್ಯಕ್ಷತೆ ವಹಿಸಲಿದ್ದಾರೆ. ಕುಂದಾಪ್ರ ಕನ್ನಡದ ವಾಗ್ಮಿ ಮನು ಹಂದಾಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ರಂಗ ಕಲಾವಿದ, ಚಲನಚಿತ್ರ ನಟ ರಘು ಪಾಂಡೇಶ್ವರ ಭಾಗವಹಿಸಲಿದ್ದಾರೆ. ಮನೋರಂಜನಾ ಕಾರ್ಯಕ್ರಮವಾಗಿ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಮತ್ತು ತಂಡದವರಿಂದ ಕುಂದಾಪ್ರ ಕನ್ನಡ ಜಾನಪದ ಗೀತೆಯ ರಸಮಂಜರಿ ಹಾಗೂ ಕುಂದಾಪುರದ ಕುಳ್ಳಪ್ಪು ತಂಡದವರಿಂದ ಗಿರಾಕಿಯೇ ಇಲ್ಲಾ ಮಾರಾಯಾ ಎಂಬ ನಗೆ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗ್ರಾಮೀಣ ತಿಂಡಿಯಾಗಿರುವ ಬಿಸಿಬಿಸಿ ಹಲಸಿನ ಹಪ್ಪಳ ಹಾಗೂ ಕಾಳು ಮೆಣಸಿನ ಬಿಸಿಬಿಸಿ ಪಾನಕದ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ.
