ಲೋಕಸಭೆಯ ಸಚೇತಕರಾಗಿ ಚೊಚ್ಚಲ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಯ್ಕೆ
ನವದೆಹಲಿ: ನೂತನ ಲೋಕಸಭೆ ಅಸ್ತಿತ್ವಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಮಹತ್ವದ ನಿರ್ಧಾರಗಳಲ್ಲಿ ಒಂದಾದ ಸಚೇತಕರ ತಂಡದಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ.

ಒಟ್ಟು ಹದಿನೇಳು ಜನ ಇರುವ ಈ ಸಮಿತಿಯಲ್ಲಿ ಒಬ್ಬ ಮುಖ್ಯ ಸಚೇತಕ ಹಾಗೂ 16 ಸಚೇತಕರು ಇರಲಿದ್ದಾರೆ. ಆ ಪೈಕಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಥಾನ ಪಡೆದಿರುವುದು ಪ್ರಧಾನಿ ಜೊತೆಗಿನ ಸಂಬಂಧವನ್ನು ಪ್ರತಿಪಾದಿಸಿದೆ. ಈ ಮೂಲಕ ಲೋಕಸಭೆಯಲ್ಲಿ ಕೋಟಾ ತಮ್ಮ ದಕ್ಷತೆಯನ್ನು ಗುರುತಿಸಿಕೊಳ್ಳಲು ದೊಡ್ಡ ಅವಕಾಶವನ್ನು ಬಿಜೆಪಿ ನೀಡಿದಂತಾಗಿದೆ. ಈ ಬಗ್ಗೆ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಕೋಟಾ ಶ್ರೀನಿವಾಸ ಪೂಜಾರಿ, “ಬಿಜೆಪಿಯ ಸಂಸದೀಯ ಮಂಡಳಿಯು ನನ್ನನ್ನು ಲೋಕಸಭಾ ಸಚೇತಕ ಹುದ್ದೆಗೆ ಪರಿಗಣಿಸಿ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು (ಟ್ವಿಟರ್) ಬರೆದುಕೊಂಡಿದ್ದಾರೆ.

ಕೋಟಾ ಆಯ್ಕೆ ಬಗ್ಗೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ‘ಎಕ್ಸ್’ ಮೂಲಕ ಅಭಿನಂದಿಸಿದ್ದು, “ರಾಜ್ಯದಲ್ಲಿ ಸಚಿವರಾಗಿ, ವಿಧಾನ ಪರಿಷತ್ ವಿರೋಧಪಕ್ಷ ನಾಯಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಹಾಗೂ ಪಕ್ಷ ಸಂಘಟನೆಗೂ ಅನನ್ಯ ಕೊಡುಗೆ ನೀಡಿರುವ ಶ್ರೀನಿವಾಸ್ ಪೂಜಾರಿ ಲೋಕಸಭೆಯ ಸಚೇತಕರಾಗಿ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುವರೆಂಬ ವಿಶ್ವಾಸದೊಂದಿಗೆ ಶುಭ ಹಾರೈಸುವೆ’ಬರೆದುಕೊಂಡಿದ್ದಾರೆ.
ಏನಿದು ಸಚೇತಕ ತಂಡ? : ಇದು ಸದನದ ನಡಾವಳಿಗಳು ಯಶಸ್ವಿಯಾಗಿ ನಡೆಯುವಂತೆ ಆಡಳಿತ ಪಕ್ಷಕ್ಕೆ ಸಹಕಾರ ನೀಡುತ್ತದೆ. ಸದನದಲ್ಲಿ ಮಂಡಿಸಲ್ಪಡುವ ಮಸೂದೆಗಳನ್ನು ದೀರ್ಘವಾಗಿ ಅದ್ಯಯನ ಮಾಡಿ ಸಿದ್ಧಪಡಿಸುತ್ತದೆ. ಅಲ್ಲದೇ ಆಡಳಿತ ಪಕ್ಷದ ಸಂಸತ್ ಸದಸ್ಯರಿಗೆ ಸೂಕ್ತ ಮಾಹಿತಿಯನ್ನು ನೀಡುತ್ತದೆ. ಕರಡು ಪ್ರತಿ ಸೇರಿದಂತೆ ಎಲ್ಲಾ ಸಲಕರಣೆಗಳನ್ನು ಮಸೂದೆ ಮಂಡಿಸಬೇಕಾದ ಸಚಿವರಿಗೆ ಒದಗಿಸಬೇಕು. ಕಲಾಪದ ಸಂದರ್ಭ ಆಡಳಿತ ಪಕ್ಷ ನಡೆಸುವ ಎಲ್ಲಾ ಚಟುವಟಿಕೆಗಳನ್ನು ಆ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರಿಗೆ ಮಾಹಿತಿ ನೀಡಿ ಅವರೆಲ್ಲರಿಗೂ ಸರ್ಕಾರದ ಉದ್ದೇಶವನ್ನು ಮನವರಿಕೆ ಮಾಡಿಕೊಡಬೇಕು.
