ಕುಂದಾಪುರ: ಸಾರಿಗೆ ನೌಕರರ ಕಲ್ಯಾಣ ಮಂಡಳಿ ರಚನೆಯಾಗಿದ್ದು ಸಿಐಟಿಯು ಹೋರಾಟಕ್ಕೆ ಸಂದ ಜಯ – ಸುರೇಶ್ ಕಲ್ಲಾಗರ
ಕುಂದಾಪುರ ತಾಲೂಕು ಆಟೋರಿಕ್ಷಾ ವಾಹನ ಚಾಲಕರ 48 ನೇ ಮಹಾಸಭೆ.
ಕುಂದಾಪುರ: ರಾಜ್ಯದಲ್ಲಿರುವ ಆಟೋ, ಬಸ್ಸು ಚಾಲಕರು, ನಿರ್ವಾಹಕರು, ಕ್ಲೀನರ್, ವಾಹನ ಮೆಕಾನಿಕ್, ಆಟೋಮೊಬೈಲ್ ಕಾರ್ಮಿಕರಿಗೆ ಶ್ರೇಯೋಭಿವೃದ್ಧಿಗಾಗಿ ಮೋಟಾರು ವಾಹನ ನೌಕರರ ಕಲ್ಯಾಣ ಮಂಡಳಿ ರಚನೆಗೆ ರಾಜ್ಯಪಾಲರು ಅಂಕಿತ ಹಾಕಿರುವುದು ಸಿಐಟಿಯು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು. ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ನಡೆದ 48 ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಆಟೋರಿಕ್ಷಾ ಚಾಲಕರು ತಮ್ಮ ಕುಟುಂಬಗಳ ನಿರ್ವಹಣೆ ಗಾಗಿ 12-14 ಘಂಟೆಗಳ ಕಾಲ ದುಡಿಯುತ್ತಿದ್ದಾರೆ ಇದರಿಂದಾಗಿ ಅವರಿಗೆ ಹ್ರದಯಾಘಾತ, ಅನಾರೋಗ್ಯಗಳು ಕಾಡುತ್ತಿದೆ.ಹಿಂದಿನ ಒಂದು ವರ್ಷದಲ್ಲಿ ಸುಮಾರು 11 ಸಾವಿರ ಮಂದಿ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ರಚನೆ ಆಗಿರುವ ಕಲ್ಯಾಣ ಮಂಡಳಿಯ ಮೂಲಕ ಸಾರಿಗೆ ನೌಕರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ನೌಕರರ ರಕ್ಷಣೆಗಾಗಿ ಬಜೆಟ್ ನಲ್ಲಿಯೂ ಅನುದಾನ ನೀಡಲು ಕಟಿಬದ್ಧವಾಗಬೇಕು ಎಂದರು. ಸಿಐಟಿಯು ಮುಖಂಡರಾದ ಎಚ್ ನರಸಿಂಹ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ, ಸಂಘದ ಗೌರವಾಧ್ಯಕ್ಷ ಎಚ್ ಕರುಣಾಕರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬ್ರಹ್ಮಾವರ ಆಟೋರಿಕ್ಷಾ ಸಂಘದ ಮುಖಂಡ ಸದಾಶಿವ ಪೂಜಾರಿ ಇದ್ದರು.
ಸಂಘದ ಅಧ್ಯಕ್ಷ ರಮೇಶ್ ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ವಾರ್ಷಿಕ ವರದಿ ಮಂಡಿಸಿದರು. ಮಹಾಸಭೆಯು ವರದಿ ಮತ್ತು ಲೆಕ್ಕ ಪತ್ರದ ಮೇಲೆ ಚರ್ಚಿಸಿ ಅಂಗೀಕರಿಸಲಾಯಿತು. ಆಟೋ , ಟ್ಯಾಕ್ಸಿ ಗೂಡ್ಸ್ ವಾಹನಗಳಿಗೆ ಅಧಿಕೃತ ನಿಲ್ದಾಣಗಳನ್ನು ಗುರುತಿಸಬೇಕು, ಬೈಂದೂರು ಕುಂದಾಪುರಕ್ಕೆ ತಲಾ ಎರಡು ಸಿಎನ್ ಜಿ ಬಂಕ್ ಗಳನ್ನು ತೆರೆಯಬೇಕು. ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ -2019 ವಾಪಾಸ್ಸು ಪಡೆಯಬೇಕು. ನೂತನ ಕಾರ್ಮಿಕ ಕಾಯ್ದೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಾಪಾಸ್ಸು ಪಡೆಯಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಯಿತು. ಇದೇ ಸಂದರ್ಭ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ವಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿ ಸೇರಿದಂತೆ 22 ಮಂದಿ ಪದಾಧಿಕಾರಿಗಳನ್ನೊಳಗೊಂಡ ಸಮಿತಿ ಆಯ್ಕೆ ಮಾಡಲಾಯಿತು. ಮಂಜುನಾಥ್ ಶೋಗನ್ ಸ್ವಾಗತಿಸಿ, ರವಿ ವಿಎಂ ವಂದಿಸಿದರು.
