ಕುಂದಾಪುರ: ನಿರಂತರ ಸುರಿಯುತ್ತಿರುವ ಭಾರಿ ಮಳೆ – ಸಮುದ್ರ ತೀರಕ್ಕೆ ಅಪ್ಪಳಿಸುತ್ತಿರುವ ಕಡಲ ಅಲೆ

ಕುಂದಾಪುರ: ದಿನದಿಂದ ದಿನಕ್ಕೆ ಮಳೆ ಭೀಕರವಾಗುತ್ತಿದೆ. ಗಾಳಿಯ ರಭಸವೂ ಹೆಚ್ಚಾಗುತ್ತಿದೆ. ಕರಾವಳಿ ತೀರದಲ್ಲಿ ನೆರೆ ಜಾಸ್ತಿಯಾಗುತ್ತಿದೆ.

ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಮುದ್ರ ಮಟ್ಟ ಮೇಲಕ್ಕೆ ಬಂದಿದ್ದು ಕಡಲ ತೀರಗಳಿಗೆ ಅಲೆಗಳು ಅಪ್ಪಳಿಸುತ್ತಿವೆ. ತೀರದಲ್ಲಿರುವ ಮನೆಗಳಿಗೂ ಸಮುದ್ರದ ನೀರು ನುಗ್ಗುತ್ತಿದೆ. ಸಮುದ್ರ ತೀರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಭಯದಿಂದ ದಿನ ದೂಡುವಂತಾಗಿದೆ.

ದೇಶದ ಪ್ರಸಿದ್ಧ ಕಡಲ ತೀರಗಳಲ್ಲಿ ಒಂದಾಗಿರುವ ತ್ರಾಸಿ ಮರವಂತೆ ಪ್ರದೇಶಗಳಲ್ಲಿಯೂ ಕಡಲಬ್ಬರ ಭಯವನ್ನು ಸೃಷ್ಟಿಸುತ್ತಿದೆ. ಶಿಲೆಗಲ್ಲಿನ ತಡೆಗೋಡೆಗಳಿಗೆ ಅಪ್ಪಳಿಸುತ್ತಿರುವ ಅರಬ್ಬಿ ಸಮುದ್ರದ ಅಲೆಗಳು ತಡೆಗೋಡೆಗಳನ್ನು ಬರುತ್ತಿವೆ. ನೂರಾರು ತೆಂಗಿನ ಮರಗಳು ಸಮುದ್ರ ಪಾಲಾಗುತ್ತಿವೆ. ಕಡಲ ಕೊರೆತಕ್ಕೆ ಹಾಕಲಾದ ಶಿಲೆಗಲ್ಲುಗಳ ರಾಶಿ ಸಮುದ್ರ ಪಾಲಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ತಕ್ಷಣ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತ ಪರಿಹಾರ ಕ್ರಮಕ್ಕೆ ಮುಂದಾಗಬೇಕಿದೆ.
