ಪರಿಸರ ಕಾಳಜಿ ನಿರಂತರವಾಗಬೇಕಿದೆ : ಪಂಚವರ್ಣ ಸಂಸ್ಥೆಯ ಸೇವೆಗೆ ಅವಿನಾಶ್ ಕಾಮತ್ ಶ್ಲಾಘನೆ
ಕೋಟ: ಪರಿಸರ ಪ್ರೇಮ ಎನ್ನುವುದು ಹೃದಯದಿಂದ ಬಂದಾಗ ಸೇವೆ ಸಾರ್ಥಕ್ಯ ಪಡೆಯುತ್ತದೆ. ಪಂಚವರ್ಣ ಸಂಸ್ಥೆಯು 216ನೇ ಭಾನುವಾರದ ಪರಿಸರ ಅಭಿಯಾನ ಕಾರ್ಯಕ್ರಮದ ಮೂಲಕ ಪರಿಸರ ಕಾಳಜಿ ಹಾಗೂ ಅದನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಪ್ರತೀ ಗ್ರಾಮದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸಂಘಸಂಸ್ಥೆಗಳು ಹುಟ್ಟಿಕೊಂಡರೆ ಆ ಪರಿಸರ ಹಚ್ಚ ಹಸಿರಾಗುವುದರಲ್ಲಿ ಅನುಮಾನವೇ ಇಲ್ಲ. ಸಾಮಾಜಿಕ ಪ್ರಜ್ಞೆ ಎಂಬುದು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಪ್ರಕೃತಿಯನ್ನು ಪ್ರೀತಿಸಿ ಬೆಳೆಸುವ ಮನಸ್ಥಿತಿ ಸೃಷ್ಠಿಯಾದರೆ ಶುಚಿ-ಶುದ್ಧ ಪರಿಸರ ನಮ್ಮದಾಗುತ್ತದೆ ಎಂದು ಪರಿಸರಪ್ರೇಮಿ, ನಿರೂಪಕ ಅವಿನಾಶ್ ಕಾಮತ್ ಹೇಳಿದರು.

ಪಾಂಪಳ್ಳಿ ಡಾ.ಬಾಲಕೃಷ್ಣ ನಕ್ಷತ್ರಿ ಮನೆಯ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ, ಸಿನಿಯರ್ ಜೆಸಿಐ ಕೋಟ ಇವರುಗಳ ಸಹಯೋಗದೊಂದಿಗೆ 216ನೇ ಪರಿಸರಸ್ನೇಹಿ ಹಸಿರು ಜೀವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಪನ್ಯಾಸಕ ಸಂಜೀವ ಗುಂಡ್ಮಿ ಮಾತನಾಡಿ, ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಮನುಕುಲ ಪರಿಸರದ ಬಗ್ಗೆ ಯಾವುದೇ ರೀತಿ ಕಾಳಜಿ ವಹಿಸುತ್ತಿಲ್ಲ. ಈ ಕಾರಣದಿಂದಾಗಿ ಪ್ರಾಕೃತಿಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆವಹಿಸಿದ್ದರು. ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ಉಪನ್ಯಾಸಕ ಡಾ.ಬಾಲಕೃಷ್ಣ ನಕ್ಷತ್ರಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮೂಡುಗಿಳಿಯಾರು ಇದರ ಪೂರ್ವಾಧ್ಯಕ್ಷ ಶರಣಯ್ಯ ಹಿರೇಮಠ, ಪಾಂಚಜನ್ಯ ಸಂಘ ಹಂದಟ್ಟು ಪಾರಂಪಳ್ಳಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವಿಸಿದರು. ಸಂಚಾಲಕಿ ಸುಜಾತ ಎಂ ಬಾಯರಿ ನಿರೂಪಿಸಿ, ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.
