ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ : ಡಾ.ಗೋವಿಂದ ಬಾಬು ಪೂಜಾರಿಯವರ ಶೆಪ್ ಟಾಕ್ ಸಂಸ್ಥೆ ಲೋಕಾರ್ಪಣೆ

ಕುಂದಾಪುರ: ಹಳ್ಳಿಯಿಂದ ಡೆಲ್ಲಿಯವರೆಗೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಲು ಡಾ. ಗೋವಿಂದ ಬಾಬು ಪೂಜಾರಿಯವರಿಗೆ ಅವರ ಬಾಲ್ಯದ ಬಡತನದ ನೋವೇ ಕಾರಣ. ತನ್ನೂರಿನ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸುವ ಅವರ ಚಿಂತನೆ ಎಲ್ಲರಿಗು ಮಾದರಿಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.


ಅವರು ಬೈಂದೂರು ತಾಲೂಕಿನ ಹೇರಂಜಾಲಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಮಾಜ ಸೇವಕ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಅವರ ಮಾಲೀಕತ್ವದ ಶೆಫ್ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಚಿಕ್ಕಿ,ಚಕ್ಕುಲಿ ಮತ್ತು ಇತರ ಖಾದ್ಯಗಳ ಉತ್ಪಾದನಾ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಗೌರಿಗದ್ದೆ ಆಶ್ರಮ ಅವಧೂತ ಶ್ರೀ ವಿನಯ್ ಗುರೂಜಿ ಅವರು ಚಿಕ್ಕಿ ಉತ್ಪನವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿ, ಡಾ.ಗೋವಿಂದ ಬಾಬು ಪೂಜಾರಿ ಅವರು ನವ ಉದ್ಯಮಗಳನ್ನು ಸ್ಥಾಪಿಸಿ ಸಾವಿರಾರು ಯುವಕರಿಗೆ ಕೆಲಸವನ್ನು ನೀಡುವಂತಹ ಕಾಯಕವನ್ನು ಮಾಡುತ್ತಿದ್ದಾರೆ. ಅವರ ಉದಾತ್ತ ಮನೋಭಾವದಿಂದ ಬಹಳಷ್ಟು ಮನೆಗಳು ಬೆಳಕು ಕಾಣುವಂತಾಗಿದೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ವಂತ ಉದ್ಯೋಗವನ್ನು ಮಾಡಲು ಸಾಧ್ಯವಾಗದೆ ಇದ್ದವರಿಗೆ ಇಂತಹ ಕೈಗಾರಿಕೆಗಳು ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದರು.

ಶೆಫ್ಟಾಕ್ ನ್ಯೂಟ್ರಿಪುಡ್ಸ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಗೋವಿಂದ ಬಾಬು ಪೂಜಾರಿ ಅವರು ಸ್ವಾಗತಿಸಿ ಮಾತನಾಡಿ, ಕೆರೆಯ ನೀರನುಬಕೆರೆಗೆ ಚೆಲ್ಲಿ ಎಂಬಂತೆ ಸಂಪಾದನೆ ಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದೇನೆ. ಸಮಾಜ ಸೇವೆಯಲ್ಲಿ ಶಿಕ್ಷಣಮತ್ತು ಸೂರು ನನ್ನಬಮೊದಲ ಆದ್ಯತೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾದಾಗ ಗ್ರಾಮ ಸದೃಢವಾಗುತ್ತದೆ ಎಂದರು.
ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಶುಭಹಾರೈಸಿದರು. ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಆಯ್ದ ಮಹಿಳೆಯರಿಗೆ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹೋಲಿಗೆ ಯಂತ್ರ ಹಾಗೂ.ಅನಾರೋಗ್ಯಪೀಡಿತರಿಗೆ ಆರ್ಥಿಕ ಧನಸಹಾಯ ವಿತರಿಸಲಾಯಿತು.
ಕಂಬದಕೋಣೆ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಮಾಜಿ ಜಿ.ಪಂ ಉಪಾಧ್ಯಕ್ಷ ಎಸ್.ರಾಜು ಪೂಜಾರಿ, ಮಾಜಿ ತಾ.ಪಂ ಸದಸ್ಯ ವಿಜಯ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ಮಾಲತಿ ಗೋವಿಂದ ಪೂಜಾರಿ, ಕುಂದಾಪುರ ಸಹಾಯಕ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್, ಬೈಂದೂರು ತಹಶೀಲ್ದಾರ್ ಪ್ರದೀಪ್ ಉಪಸ್ಥಿತರಿದ್ದರು.
