ಹೇರಿಕುದ್ರು ಶಾಲೆ ರಸ್ತೆಗೆ ಗಂಗಾಧರ ಶೆಟ್ಟಿ ಹೆಸರಿಡಲು ಗ್ರಾಮಸ್ಥರ ಮನವಿ
ಕುಂದಾಪುರ: ಇಡೀ ಊರಿಗೆ ಊರೇ ಕೊಂಡಾಡುತ್ತಿದ್ದ, ಸಾಮಾಜಿಕ ಕಾರ್ಯಕರ್ತ, ನಗಳ್ಳಿ ಗ್ರಾಮ ಪಂಚಾಯಿತಿ ಸೋಲಿಲ್ಲದ ಸರದಾರನಂತೆ ನಿರಂತರವಾಗಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿದ್ದ ದಿ. ಹೆಚ್. ಗಂಗಾಧರ ಶೆಟ್ಟಿಯವರ ಹೆಸರನ್ನು ಹೇರಿಕುದ್ರು ಶಾಲೆಗೆ ಹೋಗುವ ರಸ್ತೆಗೆ ನಾಮಕರಣ ಮಾಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಹೇರಿಕುದ್ರು ಗ್ರಾಮಸ್ಥರು ಆನಗಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮನವಿ ಮಾಡಿದ್ದು, ಅದರಲ್ಲಿ ನಮ್ಮ ಊರಿನ ಹೆಮ್ಮೆಯ ಪತ್ರ ಹಾಗೂ ಆನಗಳ್ಳಿ ಗ್ರಾಮ ಪಂಚಾಯತ್ನ ದೀರ್ಘಾವಧಿ ಸದಸ್ಯರು ಮತ್ತು ಜನರ ಪ್ರೀತಿ ಪಾತ್ರರಾಗಿದ್ದ ಹೆಚ್. ಗಂಗಾಧರ ಶೆಟ್ಟಿ ಅವರ ಆಕಾಲಿಕ ಮರಣದಿಂದ ಇಡೀ ಗ್ರಾಮದ ಜನರು ದುಃಖಿತರಾಗಿದ್ದೇವೆ. ಗಂಗಾಧರ ಶೆಟ್ಟಿ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಜನರಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಮ್ಮ ಊರಿನ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾರರು. ಸದ್ರಿ ಊರಿನ ಪ್ರತಿಯೊಬ್ಬ ವ್ಯಕ್ತಿಯು ಕೂಡ ಗಂಗಾಧರ ಶೆಟ್ಟಿ ಅವರ ಸವಿ ನೆನಪಿಗಾಗಿ ಹೇರಿಕುದ್ರುವಿನ ಶಾಲೆ ರಸ್ತೆಗೆ ಎಚ್. ಗಂಗಾಧರ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ಅಪೇಕ್ಷೆ ಪಡುತ್ತಿದ್ದಾರೆ. ಜೊತೆಗೆ ಹರ್ಷವರ್ಧನ ಶೆಟ್ಟಿ ಅವರ ಅಂಗಡಿ ಬಳಿ ಪಂಜು ಪೂಜಾರಿ ಮತ್ತು ರಾಧ ಪೂಜಾರಿ ಹಾಗೂ ಮಕ್ಕಳ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡುವ ಬಗ್ಗೆ ನಾವೆಲ್ಲರೂ ತೀರ್ಮಾನಿಸಿದ್ದು , ಪಂಚಾಯತ್ ಈ ಬಗ್ಗೆ ನಿರ್ಣಯ ಕೈಗೊಂಡು ಕೂಡಲೇ ರಸ್ತೆಗೆ ನಾಮಕರಣ ಮಾಡಿ ಪುತ್ಥಳಿ ನಿರ್ಮಾಣ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಬಿಲ್ಲವ ಹಾಗೂ ಪಿಡಿಒ ಅನಿಲ್ ಬಿರಾದರ್ ಮನವಿ ಸ್ವೀಕರಿಸಿದರು. ಹೇರಿಕುದ್ರು ಗ್ರಾಮಸ್ಥರು ಮನವಿ ನೀಡಿದರು.
