ಬೈಂದೂರು: ಹೆದ್ದಾರಿ ಅವಾಂತರ : ಸರ್ಕಾರೀ ಶಾಲೆಗೆ ನುಗ್ಗಿದ ನೀರು

ಬೈಂದೂರು: ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಶಾಲಾ ಕೊಠಡಿ ಒಳಗೆ ನೀರು ನುಗ್ಗಿದ ಘಟನೆ ಶುಕ್ರವಾರ ರಾತ್ರಿಯಿಂದ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಸ.ಹಿ.ಪ್ರಾ ಶಾಲೆ ರಾಹುತನಕಟ್ಟೆ ಎಂಬ ಶಾಲೆಯಲ್ಲಿ ನಡೆದಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ 7ನೇ ತರಗತಿ ಹಾಗೂ ಮುಖ್ಯೋಪಾಧ್ಯಾಯರ ಕಚೇರಿಗೆ ನೀರು ನುಗ್ಗಿದೆ.

ಶಾಲೆಯಲ್ಲಿ 3 ಕಟ್ಟಡದಲ್ಲಿ 7 ಕೊಠಡಿಗಳಿದ್ದು ಅದರಲ್ಲಿ ಮುಖ್ಯೋಪಾಧ್ಯಾಯರ ಕೊಠಡಿ, ಒಂದು ಅಕ್ಷರ ದಾಸೋಹ ಕೊಠಡಿ, ಶಾಲೆಯಲ್ಲಿ ಇಬ್ಬರು ಸರಕಾರಿ ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. 1ರಿಂದ 7 ನೇ ತರಗತಿವರೆಗೆ ಇದ್ದು 32 ಮಕ್ಕಳು ಕಲಿಯುತ್ತಿದ್ದಾರೆ. 7 ನೇ ತರಗತಿಯಲ್ಲಿ ಮೂರು ಮಕ್ಕಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಮಕ್ಕಳನ್ನು ಪಕ್ಕದ ತರಗತಿ ಕೋಣೆಯಲ್ಲಿ ಕುಳ್ಳಿರಿಸಲಾಗಿದೆ. ಮಳೆ ಹೆಚ್ಚಾದರೆ ಇತರೆ ತರಗತಿಗಳಿಗೂ ನೀರು ನುಗ್ಗುವ ಸಾಧ್ಯತೆಗಳಿದ್ದು, ಸಂಬಂದಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚರ್ತುಷ್ಪಥ ರಸ್ತೆ ಕಾಮಗಾರಿ ಮಾಡುವಾಗ ನೀರು ಹರಿದು ಹೋಗಲು ಚರಂಡಿ ಮಾಡದೇ ಇರುವುದರಿಂದ ತಗ್ಗಲ್ಲಿರುವ ರಾಹುತನಕಟ್ಟೆ ಭಾಗದಲ್ಲಿ ಮಳೆಗಾಲದಲ್ಲಿ ನೀರು ತುಂಬುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ಮನೆಯವರು ತಮ್ಮ ಮನೆಗಳಿಗೆ ನೀರು ಬಾರದಂತೆ ಅಡ್ಡ ಹಾಕಿರುವುದರಿಂದ ಮಳೆ ನೀರು ಶಾಲೆಗೆ ನುಗ್ಗಿರುತ್ತದೆ. ಇಲ್ಲಿ ಚರಂಡಿ ಮಾಡಿ ಸುಮಾರು 200 ಮೀ ದೂರದಲ್ಲಿರುವ ಸುಮನಾವತಿ ನದಿಗೆ ನೀರು ಹರಿದು ಹೋಗುವಂತೆ ಮಾಡುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
