ಸಾಸ್ತಾನ : ಸಾಸ್ತಾನ ಟೋಲ್ನಲ್ಲಿ ಸ್ಥಳಿಯ ವಾಹನಗಳಿಗೆ ಶುಲ್ಕ ರಹಿತ ಪ್ರಯಾಣಕ್ಕೆ ಆಗ್ರಹಿಸಿ ಶನಿವಾರ ನಡೆದ ಪ್ರತಿಭಟನೆಯ ಪರಿಣಾಮ ಸೋಮವಾರ ಕರೆಯಲಾದ ಅಧಿಕಾರಿಗಳ ಸಭೆ ಮುರಿದು ಬಿದ್ದಿದ್ದು, ಮಂಗಳವಾರ ಮತ್ತೆ ಸಭೆಯಲ್ಲಿ ಮಾತುಕತೆ ನಡೆಯುತ್ತದೆ ಎಂದು ತಿಳಿದು ಬಂದಿದೆ.
ಸೋಮವಾರ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಹಶೀಲ್ದಾರ್ ಶ್ರೀಕಾಂತ ಎಸ್ ಹೆಗಡೆ ಮತ್ತು ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಅವರ ನೇತೃತ್ವದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರ ಸಭೆ ನಡೆಯಿತು. ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯರಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು, ಹೋರಾಟದ ಫಲವಾಗಿ 2018ರಿಂದ ಸ್ಥಳೀಯರಿಗೆ ಸಿಗುತ್ತಿದ್ದ ಟೋಲ್ ವಿನಾಯಿತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಟೋಲ್ ಗುತ್ತಿಗೆ ಪಡೆದ ಹೈವೇ ಕನ್ಸ್ಟ್ರಕ್ಶ್ಯನ್ 1 ರ ಅಧಿಕಾರಿ ಪ್ರೀತಂ ಗಂಗೂಲಿ ಭಾರತದಾದ್ಯಂತ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ತಿಂಗಳೊಂದಕ್ಕೆ ರೂ.310 ಪಾವತಿಸಿ ಪಾಸ್ ಪಡೆದು ಸ್ಥಳೀಯರು ಟೋಲ್ಗಳಲ್ಲಿ ಸಾಗಬಹುದು. ಆದರೆ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದರು.
ಆದರೆ ಇದಕ್ಕೆ ಹೋರಾಟ ಸಮಿತಿ ಮುಖಂಡರು ಒಪ್ಪದ ಕಾರಣ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಜೊತೆಗೆ ಮಂಗಳವಾರ ಸಭೆ ಕರೆದು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಯಿತು. ಒಂದು ವೇಳೆ ಮಂಗಳವಾರದ ಸಭೆಯೂ ಮುರಿದುಬಿದ್ದರೆ ಮತ್ತೆ ಉಗ್ರ ಪ್ರತಿಭಟನೆ ನಡೆಸುವ ಬಗ್ಗೆಯೂ ತೀರ್ಮಾನಿಸಲಾಯಿತು.
ಬ್ರಹ್ಮಾವರ ಎಸೈ ಮಧು, ಕೋಟ ಎಸೈಗಳಾದ ತೇಜಸ್ವಿ, ಸುಧಾ ಪ್ರಭು, ಹೆದ್ದಾರಿ ಜಾಗೃತಿ ಸಮಿತಿಯ ಪ್ರತಾಪ್ ಶೆಟ್ಟಿ, ವಿಠಲ ಪೂಜಾರಿ, ಅಲ್ವಿನ್ ಅಂದ್ರಾದೆ, ನಾಗರಾಜ ಗಾಣಿಗ, ದಿನೇಶ ಗಾಣಿಗ ಮತ್ತಿತರರು ಇದ್ದರು.