ಉಡುಪಿ: ಬಿಜೆಪಿ ರಾಜ್ಯ ನಾಯಕರಿಂದ ಕಡೆಗಣಿಸಲ್ಪಟ್ಟ ಉಡುಪಿಯ ಮಾಜೀ ಶಾಸಕ ರಘುಪತಿ ಭಟ್ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುವುದು ಖಚಿತವಾಗಿದೆ. ಸೋಮವಾರವಷ್ಟೇ ಸುದ್ದಿಗಾರರೊಂದಿಗೆ ಖಚಿತಪಡಿಸಿದ್ದ ರಘುಪತಿ ಭಟ್ ಮೇ 16ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಈ ಬಗ್ಗೆ ವಾಸ್ತವ.ಕಾಂ ಜೊತೆಗೆ ದೂರವಾಣಿಯ ಮೂಲಕ ಮಾತನಾಡಿದ ಅವರ ಆಪ್ತ ಸಹಾಯಕ, ಬುಧವಾರ ಸಂಜೆ ಬೆಂಬಲಿಗರೊಂದಿಗೆ ಮೈಸೂರಿಗೆ ತೆರಳಲಿದ್ದು, ಗುರುವಾರ ಮಧ್ಯಾಹ್ನ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಪ್ರಕಾಶ್ ಅವರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದಿದ್ದಾರೆ.
ಬಿಜೆಪಿಗೆ ಬಂಡಾಯದ ಬಿಸಿ: ಕಳೆದ ವಿಧಾನಸಭಾ ಚುನಾವಣೆಯಿಂದಲೇ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟುತ್ತಿದೆ. ಅದೂ ಬಿಜೆಪಿಯಲ್ಲಿದ್ದುಕೊಂಡೇ ಬಂಡಾಯ ನಡೆಯುತ್ತಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ನನ್ನನ್ನು ಉಚ್ಚಾಟಿಸಿದರೂ ನಾನ ಬಿಜೆಪಿ ಎನ್ನುವ ನಾಯಕರ ವರ್ತನೆಗೆ ಬಿಜೆಪಿ ರಾಜ್ಯ ನಾಯಕರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದೂ ಅರ್ಥವಾಗುತ್ತಿಲ್ಲ ಎನ್ನಲಾಗುತ್ತಿದೆ.
ನಾನು ಬಿಜೆಪಿಯೇ!? : ಇದುವರೆಗೆ ಬಂಡಾಯವೆದ್ದವರು ಎಲ್ಲರೂ ಹೇಳುತ್ತಿರುವುದು ನಾನೂ ಬಿಜೆಪಿಯೆ. ಹಾಗಾದರೆ ನೈಜ ಬಿಜೆಪಿಗರು ಯಾರು? ಅಲ್ಲಿದ್ದವರೋ ಇಲ್ಲಿರುವವರೋ ಎನ್ನುವ ಗೊಂದಲ ಬಿಜೆಪಿಯ ಕಾರ್ಯಕರ್ತರಲ್ಲಿ ಮೂಡುವಂತಾಗಿದೆ. ಅಲ್ಲದೇ ರಘುಪತಿ ಭಟ್ ವಿಚಾರದಲ್ಲಿ ಜಿಲ್ಲಾ ಮಟ್ಟದ ನಾಯಕರ ಪೈಕಿ ಹೆಚ್ಚಿನವರು ಭಟ್ಟರಿಗೆ ಆತ್ಮೀಯರಾಗಿರುವವರೇ. ಹಾಗಾಗಿ ಈ ಬಾರಿಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಪಕ್ಷದ ಪರ ನಿಲ್ಲುತ್ತಾರೋ ಅಥವಾ ವ್ಯಕ್ತಿಯ ಪರವೋ ಎನ್ನುವ ಕುತೂಹಲ ಜನಸಾಮಾನ್ಯರಲ್ಲಿ ಹೆಚ್ಚುತ್ತಲೇ ಇದೆ.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಐದು ಜಿಲ್ಲೆಗಳು ಸೇರಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ(ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾ.) ಜಿಲ್ಲೆಗಳು ಸೇರಿವೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 75 ಸಾವಿರಕ್ಕಿಂತಲೂ ಅಧಿಕ ಪದವೀಧರ ಮತದಾರರಿದ್ದಾರೆ.