ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಅಪಘಾತ : ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ತಾಯಿ ಸಾವು
ಕುಂದಾಪುರ: ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿಯವರ ತಾಯಿ ಶೋಭಾ ಜಿ ಬಿಲ್ಲವ (65) ಸಾವನ್ನಪ್ಪಿದ್ದಾರೆ.

ದಿವಂಗತ ನಾರಾಯಣ ಬಿಲ್ಲವ ಅವರ ಪತ್ನಿಯಾಗಿರುವ ಶೋಭಾ ಜಿ ಬಿಲ್ಲವ ತಮ್ಮ ಸಂಬಂಧಿಕರ ಮದುವೆಗೆಂದು ಬಂದಿದ್ದರು. ಶುಕ್ರವಾರ ಮಧ್ಯಾಹ್ನ ಸುಮಾರು 2.15ಕ್ಕೆ ಹಂಗಳೂರು ಸಮೀಪದ ನಗು ಪ್ಯಾಲೇಸ್ ಎದುರುಗಡೆ ಹೆದ್ದಾರಿ ದಾಟುತ್ತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಬಂದ ಬೊಲೆರೊ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಶೋಭಾ, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.