ಸತ್ಯಜಿತ್ ನೇತೃತ್ವದ ನಾರಾಯಣಗುರು ವಿಚಾರ ವೇದಿಕೆಯಿಂದ ಶ್ರೀನಿವಾಸ ಪೂಜಾರಿ ಪರ ಪ್ರಚಾರ
ಉಡುಪಿಯಲ್ಲಿ ಹೆಚ್ಚುತ್ತಿದೆ ಜಾತಿ ಸಮೀಕರಣ


ಉಡುಪಿ : ಬಿಜೆಪಿಯಿಂದ ಹೊರಬಿದ್ದ ಹಿಂದೂ ನಾಯಕ ಸತ್ಯಜಿತ್ ಸುರತ್ಕಲ್ ತಂಡ ಬಿಲ್ಲವ ನಾಯಕರ ಪರ ಹೇಳಿಕೆ ನೀಡಿದ ಬಳಿಕ ಇದೀಗ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ರಾಜಕೀಯ ಸಮೀಕರಣದಿಂದ ಹೊರ ಬಂದಿದ್ದ ಸತ್ಯಜಿತ್ ಜಾತಿ ಸಮೀಕರಣದ ಹಿಂದೆ ಬಿದ್ದಿದ್ದಾರೆ. ದಕ್ಷಿಣ ಕನ್ನಡ, ಉಡುಪಿಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವ ಅಭ್ಯರ್ಥಿಗಳ ಪರ ಮತಯಾಚಿಸುವುದಾಗಿ ತಿಳಿಸಿದ್ದರು.
ಕಳೆದ ಎರಡು ದಿನಗಳಿಂದ ಉಡುಪಿ, ಕಾಪು, ಪಡುಬಿದ್ರಿ, ಮಲ್ಪೆ, ಕಾರ್ಕಳ ಮೊದಲಾದೆಡೆಗಳಲ್ಲಿ ಸತ್ಯಜಿತ್ ಸುರತ್ಕಲ್ ನೇತೃತ್ವದ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ತಂಡ ಬಿಲ್ಲವ ಸಮಾಜವನ್ನು ಒಟ್ಟುಗೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಹಲವು ತಂಡಗಳಾಗಿ ಸಮಾಜದ ಮುಖಂಡರುಗಳ ಮನೆಗಳ ಬೇಟಿ ಮಾಡುವುದರ ಮೂಲಕ ಪ್ರಚಾರ ಕಾರ್ಯ ನಡೆಸಿದ್ದಾರೆ. ಸತ್ಯಜಿತ್ ಸುರತ್ಕಲ್ ಜೊತೆಗೆ ವೇದಿಕೆಯ ಜಿಲ್ಲಾ ಅಧ್ಯಕ್ಷ ಅಚ್ಯುತ್ ಕಲ್ಮಾಡಿ, ನವೀನ್ ಪೂಜಾರಿ, ಶಶಿಧರ ಪೂಜಾರಿ, ರಾಕೇಶ್ ಪೂಜಾರಿ ಮೊದಲಾದವರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಇದೀಗ ಜಯಪ್ರಕಾಶ್ ಹೆಗ್ಡೆ ಪರ ಬಂಟ ಹಾಗೂ ಇತರ ಸಮುದಾಯ ಒಟ್ಟಾಗುವ ಸಾಧ್ಯತೆಗಳೂ ಕಾಣುತ್ತಿದ್ದು, ಹಲವು ಬಿಲ್ಲವ ಮುಖಂಡರುಗಳು ಸತ್ಯಜಿತ್ ಓಲೈಕೆಯನ್ನು ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ನಾರಾಯಣಗುರು ವಿಚಾರ ವೇದಿಕೆ ಮಾತ್ರ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ತುದಿಗಾಲಿನಲ್ಲಿ ನಿಂತಿದೆ. ಇತ್ತ ಬಂಟ ಹಾಗೂ ಇತರ ಸಮುದಾಯಗಳ ಲೆಕ್ಕಾಚಾರ ಏನಿದೆ ಅನ್ನುವುದು ಚುನಾವಣೆಯ ಬಳಿಕವಷ್ಟೇ ತಿಳಿಯಬೇಕಿದೆ.
