ಸಮುದಾಯ ಕುಂದಾಪುರದಿಂದ ಅಂಬೇಡ್ಕರ್ ಜಯಂತಿ ಆಚರಣೆ
ಕುಂದಾಪುರ: ಇಲ್ಲಿನ ಸಮುದಾಯ ಸಾಂಸ್ಕೃತಿಕ ಸಂಘಟನೆ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಬಸ್ರೂರಿನ ಶ್ರೀ ಶಾರದಾ ಕಾಲೇಜು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಂ ದಿನೇಶ್ ಹೆಗ್ಡೆ ಅವರು, “ಜಗತ್ತು ಕಂಡ ಅತ್ಯಂತ ಮೇಧಾವಿ, ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಬಾಲ್ಯ ನಮ್ಮ ನಿಮ್ಮಂತೆ ಸಹಜವಾಗೇನೂ ಇರಲಿಲ್ಲ ಸಾಕಷ್ಟು ಸ್ಥಿತಿವಂತರಾಗಿದ್ದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಪಡಬಾರದ ಕಷ್ಟಪಟ್ಟರು. ಶಾಲೆಯಲ್ಲಿ, ಸಮಾಜದಲ್ಲಿ ಪ್ರತಿ ಸ್ಥಳದಲ್ಲಿಯೂ ಅವಮಾನಕ್ಕೆ ಒಳಗಾದ ಅವರ ಬಾಲ್ಯದ ಜೀವನದ ಘಟನೆಗಳನ್ನು ವಿವರಿಸಿದರು. ಅವರ ಜೀವನ ನಮಗೆ ಆದರ್ಶ. ನಾವು ಈಗ ಪಡೆಯುತ್ತಿರುವ ಎಲ್ಲಾ ರೀತಿಯ ಮೂಲಭೂತ ಹಕ್ಕುಗಳು ಸೌಲಭ್ಯಗಳು ಅಂಬೇಡ್ಕರ್ ಅವರ ಚಿಂತನೆಯ ಫಲವಾಗಿದೆ ಎಂದರು. ದಲಿತರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಸಿಗಬೇಕಾದ ಸಾಮಾಜಿಕ ಆರ್ಥಿಕ ರಾಜಕೀಯ ನ್ಯಾಯದ ಜೊತೆಗೆ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವದ ಭಾವನೆಯ ಮಹತ್ವವನ್ನು ಸಾರಿದ್ದಾರೆ ಎಂದರು.
ಇದೇ ಸಂದರ್ಭ ಅಂಬೇಡ್ಕರ್ ಕುರಿತ ಹಾಡುಗಳನ್ನು ಹಾಡಲಾಯಿತು. ವೇದಿಕೆಯಲ್ಲಿ ಸಮುದಾಯ ಕುಂದಾಪುರದ ಅಧ್ಯಕ್ಷ ಡಾ ಸದಾನಂದ ಬೈಂದೂರು, ರಂಗ ನಿರ್ದೇಶಕ ರೋಹಿತ್ ಬೈಕಾಡಿ, ಸಾಮಾಜಿಕ ಕಾರ್ಯಕರ್ತ ರಾಮಾಂಜಿ ಉಪಸ್ಥಿತರಿದ್ದರು. ವಾಸುದೇವ ಗಂಗೇರ ನಿರೂಪಿಸಿದರು.