ಉಡುಪಿ ಜಿಲ್ಲಾಧಿಕಾರಿಯ ಸರ್ವಾಧಿಕಾರಿ ಧೋರಣೆ : ಚುನಾವಣಾ ಆಯೋಗಕ್ಕೆ ದೂರು
ಕುಂದಾಪುರ: ಲೋಕಸಭಾ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಜಿಲ್ಲೆಯಲ್ಲಿ ಚುನಾವಣೆಯ ನೆಪದಲ್ಲಿ ಸಾಮಾನ್ಯ ನಾಗರಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಸಮಾಜ ಸೇವಕ, ಆರ್.ಟಿ.ಐ.ಕಾರ್ಯಕರ್ತ ಶರಶ್ಚಣದ್ರ ಹೆಗ್ಡೆ ಆರೋಪಿಸಿದ್ದಾರೆ.

ಸಾರ್ವಜನಿಕ ಆಚರಣೆಗಳು ಮತ್ತು ಧಾರ್ಮಿಕ ಆಚರಣೆಗಳ ಮೇಲಿನ ನಿರ್ಬಂಧಗಳು, ಭಾರತದ ಸಂವಿಧಾನವು 25 ರಿಂದ 28 ನೇ ವಿಧಿಗಳ ಮೂಲಕ ಖಾತರಿಪಡಿಸುತ್ತದೆ. ಆದಾಗ್ಯೂ, ಚುನಾವಣಾ ಕರ್ತವ್ಯಕ್ಕೆ ತೆರಳುವ ಸರ್ಕಾರಿ ಸಿಬ್ಬಂದಿಗಳ ಸಂಖ್ಯೆಯಲ್ಲಿ ಮಾಡುತ್ತಿರುವ ಹೆಚ್ಚಳದಿಂದ ಸರ್ಕಾರೀ ಕಚೇರಿಗಳಲ್ಲಿ ನೇರವಾಗಿ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಿದಂತಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಐದು ಚುನಾವಣೆಗಳಲ್ಲಿ ನಮ್ಮ ಜಿಲ್ಲೆಯಲ್ಲಿ 70% ಕ್ಕಿಂತ ಹೆಚ್ಚು ಮತದಾನವಾಗಿತ್ತು ಮತ್ತು ಬಹುತೇಕ ಶಾಂತಿಯುತವಾಗಿತ್ತು. ನಾವೆಲ್ಲರೂ ಭಾರತದ ಸಂವಿಧಾನವನ್ನು ಗೌರವಿಸುತ್ತೇವೆ. ಇಂತಹಾ ಪರಿಸ್ಥಿತಿಯಲ್ಲಿ ಪ್ರಸ್ತುತ ಉಡುಪಿ ಜಿಲ್ಲಾಧಿಕಾರಿಗಳು ಚುನಾವಣಾ ನೀತಿಸಂಹಿತೆ ಹೆಸರಿನಲ್ಲಿ ವಂಚಿತ ಜನರಿಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದಾರೆ. ಉದಾಹರಣೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಸುಮಾರು 40ಕ್ಕೂ ಹೆಚ್ಚಿನ ಸರ್ಕಾರೀ ಕಚೇರಿಗಳಲ್ಲಿರುವ ರೆಕಾರ್ಡ್ ರೂಮ್ಗಳು, ಸಬ್ ರಿಜಿಸ್ಟರ್ ಕಛೇರಿಗಳನ್ನು ಮುಚ್ಚುವುದು ಮತ್ತು ಎಲ್ಲಾ ಕಂದಾಯ ಕೆಲಸಗಳನ್ನು ನಿಲ್ಲಿಸುವುದು, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಜನರ ಪ್ರವೇಶವನ್ನು ನಿರ್ಬಂಧಿಸುವುದು ನಡೆಯುತ್ತಿದೆ. ಅಲ್ಲದೇ ಅಧಿಕಾರಿಗಳನ್ನು ಭೇಟಿಯಾಗುವವರ ಸಂಖ್ಯೆಯನ್ನು 5ಕ್ಕೆ ನಿಗಧಿಗೊಳಿಸಿರುವುದು ಸಂವಿಧಾನಬಾಹಿರವಾದ ಕೃತ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಕಮಿಷನರ್ ಅವರಿಗೆ ಪತ್ರ ಬರೆದಿರುವ ಅವರು ಸಾಮಾಜಿಕ ನ್ಯಾಯ ಸ್ಥಾಪನೆ ಹಾಗೂ ಜಿಲ್ಲಾಧಿಕಾರಿಯವರ ಸರ್ವಾಧಿಕಾರಿ ಧೋರಣೆ ತಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ.