ಪ್ರಶ್ನಿಸಿದ್ದಕ್ಕೆ ಚೂರಿ ಇರಿತ : ಗಂಭೀರ ಗಾಯ, ಆರೋಪಿಯ ಬಂಧನ

ಕುಂದಾಪುರ: ಅತ್ತಿಗೆಯ ಬಗ್ಗೆ ಕಟ್ಟದಾಗಿ ಮಾತನಾಡಿದ್ದಾನೆ ಎನ್ನಲಾದ ಆರೋಪಿಯ ಬಳಿ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿ ಚೂರಿಯಿಂದ ಹೊಟ್ಟೆಗೆ ತಿವಿದು ಕೊಲೆ ಬೆದರಿಕೆ ಹಾಕಿದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಲ್ಲೂರು ಗ್ರಾಮದ ಪಿಂಗಾಣಿಗುಡ್ಡೆ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಪಿಂಗಾಣಿಗುಡ್ಡೆ ನಿವಾಸಿ ಆಕಾಶ್ ಎಂದು ಗುರುತಿಸಲಾಗಿದೆ. ಚೂರಿ ಇರಿತಕ್ಕೊಳಗಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ರಾಮ ಕುಮಾರ್ ಎಂದು ಗುರುತಿಸಲಾಗಿದೆ.
ರಾಮ ಕುಮಾರ್ ಅವರ ಹೆಂಡತಿಯ ಅಕ್ಕ ರೇಖಾ ಎಂಬುವರಿಗೆ ಆರೋಪಿ ಆಕಾಶನು ಕೆಟ್ಟ ಶಬ್ದವನ್ನು ಹೇಳಿದ್ದು ಈ ವಿಚಾರವನ್ನು ರೇಖಾ ಅವರು ರಾಮಕುಮಾರ್ ಅವರಿಗೆ ತಿಳಿಸಿದ್ದರು. ರಾಮಕುಮಾರ್ ತನ್ನ ಸ್ನೇಹಿತ ಮುರುಳಿ ಮತ್ತು ರೇಖಾರೊಂದಿಗೆ ತಲ್ಲೂರು ಗ್ರಾಮದ ಪಿಂಗಾಣಿಗುಡ್ಡೆಯ ಬಾವಿ ಹತ್ತಿರ ಮಾತನಾಡಿಕೊಂಡಿರುವಾಗ ಆರೋಪಿ ಆಕಾಶ ಅಲ್ಲಿಗೆ ಬಂದಾಗ ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆಕಾಶ್ ತನ್ನ ಪ್ಯಾಂಟ್ ಕಿಸೆಯಲ್ಲಿ ಹಾಕಿಕೊಂಡು ಬಂದಿದ್ದ ಚೂರಿಯಿಂದ ರಾಮ್ ಕುಮಾರ್ ಅವರ ಎಡಬದಿ ಹೊಟ್ಟೆಗೆ ತಿವಿದಿದ್ದಾನೆ. ತಪ್ಪಿಸಲು ಬಂದ ಮುರುಳಿಗೂ ಎಡಬದಿ ಬೆನ್ನಿಗೆ ಬಲವಾಗಿ ತಿವಿದಿದ್ದು ಬಳಿಕ ಕೊಲೆ ಬೆದರಿಕೆ ಹಾಕಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ರಾಮಕುಮಾರ್ ಮತ್ತು ಮುರುಳಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದುಕೊಂಡು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಿ ಆಕಾಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
