ಅಮಾಸೆಬೈಲು: ಗ್ರಾಮೀಣ ವಿದ್ಯಾರ್ಥಿಗಳಿಗೆ ಸೌಕರ್ಯಕಾರರಾಗುವುದಕ್ಕಿಂತ ಮಿಗಿಲಾದ ದೇವಕಾರ್ಯವಿಲ್ಲ – ಶ್ರೀ ಚೈತನ್ಯದಾಸ್
ತಪೋವರಿಷ್ಠಾಶ್ರಮ ಟ್ರಸ್ಟ್ ನಿಂದ ಶಾಲಾಮಕ್ಕಳಿಗೆ ಉಚಿತ ಕೊಡುಗೆಗಳ ವಿತರಣೆ

ಅಮಾಸೆಬೈಲು: ಮಕ್ಕಳು ದೇವಾಂಶಸಂಭೂತರು. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳು ಮುಗ್ಧಮನಸ್ಸಿನ ನಿಶ್ಕಲ್ಮಶ ಹೃದಯವಂತರು. ಅಂತಹಾ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಜವಾಬ್ಧಾರಿ ಸಮಾಜದ ಮೇಲಿದೆ. ವಿದ್ಯಾರ್ಥಿಗಳ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು ಅತ್ಯಂತ ಶ್ರೇಷ್ಟ ದೇವತಾಕಾರ್ಯ ಎಂದು ಕೊಲ್ಲೂರಿನ ಧರ್ಮಪೀಠ ತಪೋವರಿಷ್ಠಾಶ್ರಮ ಟ್ರಸ್ಟ್ ನ ಅಧ್ಯಕ್ಷ ಚೈತನ್ಯದಾಸ್ ಕುಮಾರ್ ಹೇಳಿದರು.
ಅವರು ಸೋಮವಾರ ಕೊಲ್ಲೂರಿನ ಧರ್ಮಪೀಠ ತಪೋವರಿಷ್ಠಾಶ್ರಮ ಟ್ರಸ್ಟ್ ವತಿಯಿಂದ ಹೆಬ್ರಿ ತಾಲೂಕಿನ ಶೇಡಿಮನೆಯ ಅರಸಮ್ಮಕಾನಿನ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಮಾಸೆಬೈಲು ಆರಕ್ಷಕ (ಪೊಲೀಸ್) ಠಾಣಾ ವ್ಯಾಪ್ತಿಯ 16 ಸರ್ಕಾರಿ ಶಾಲೆಯ 500 ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್, ಕೊಡೆ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿ,ಅವರ ಕಲಿಕೆಯನ್ನು ಪ್ರೋತ್ಸಾಹಿಸಲು ಹಮ್ಮಿಕೊಂಡ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಧರ್ಮಪೀಠ ಸನ್ಯಾಸಿ ಸನತ್ ಕುಮಾರ್ ಸಂದೇಶ ನೀಡಿದರು. ಅಮಾಸೆಬೈಲು ಠಾಣಾ ವ್ಯಾಪ್ತಿಯು ತೀರಾ ಗ್ರಾಮೀಣ ಪ್ರದೇಶವಾಗಿದ್ದು, ಪೊಲೀಸ್ ಇಲಾಖೆ ವಿದ್ಯಾರ್ಥಿಗಳ ಹಿತರಕ್ಷಣೆಗೆ ಸದಾ ಸ್ಪಂದಿಸುತ್ತದೆ. ಜನಸ್ನೇಹಿಯಾಗಿ ಕೆಲಸ ಮಾಡುವ ಪೊಲೀಸರು ಕಾನೂನು ಅವ್ಯವಸ್ಥೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ಕೈಜೋಡಿಸುತ್ತೇವೆ ಎಂದು ಅಮಾಸೆಬೈಲು ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಧಾರಾಣಿ ಟಿ ಹೇಳಿದರು.
ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ದಾಸ್ ಹೆಗ್ಡೆ ಮಾತನಾಡಿದರು. ಶಿಕ್ಷಣ ಸಂಯೋಜಕ ಶೇಖರ್ ಯು, ಶಾಲಾ ಎಸ್.ಡಿ.ಎಮ್.ಸಿಯ ಅಧ್ಯಕ್ಷೆ ಜ್ಯೋತಿ ಸತ್ಯನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಧರ್ಮಪೀಠ ಟ್ರಸ್ಟ್ ನ ಟ್ರಸ್ಟಿಗಳು ಉಪಸ್ಥಿತರಿದ್ದರು.
ಶೇಡಿಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀನಾಕ್ಷಿ ರಾವ್ ಸ್ವಾಗತಿಸಿದರು, ಕೋಟೇಶ್ವರದ ಗೀತಾ ಹೆಚ್.ಎಸ್.ಎನ್.ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಶಂಕರ್ ಐತಾಳ್ ಪ್ರಾಸ್ತಾವಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಉಷಾಲತಾ ವಂದಿಸಿದರು. ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಶಶಿಧರ್ ಶೆಟ್ಟಿ ಅರಸಮ್ಮಕಾನು ನಿರೂಪಿಸಿದರು.
