ತ್ರಾಸಿ: ಬೈಕ್ ಗಳ ಮುಖಾಮುಖಿ ಡಿಕ್ಕಿ – ಒಬ್ಬ ಸವಾರ ಸಾವು, ಇನ್ನೊಬ್ಬ ಸವಾರ ಸಹಿತ ಇಬ್ಬರು ಗಂಭೀರ
ಕುಂದಾಪುರ: ಬೈಕ್ ಗಳೆರಡರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದು ಬೈಕಿನ ಸವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರೆ, ಇನ್ನೊಂದು ಬೈಕಿನಲ್ಲಿದ್ದ ಸವಾರ ಸಹಿತ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಸೋಮವಾರ ಮಧ್ಯಾಹ್ನ ಗಂಗೊಳ್ಳಿ ಪೊಲೀಸ್ ಠಾಣಾ ತ್ರಾಸಿ ಬೀಚ್ ಅರಮ ದೇವಸ್ಥಾನ ದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಭಟ್ಕಳದ ಸಣ್ಣಬಾವಿ ಸಾತುಮನೆ ನುವಾಸಿ ನಾಗಪ್ಪ ನಾಯ್ಕ್ ಎಂಬುವರ ಮಗ ದೀಪಕ್ ನಾಗಪ್ಪ ನಾಯ್ಕ್ (23) ಎಂದು ಗುರುತಿಸಲಾಗಿದೆ. ಗಾಯಗೊಂಡ ಇನ್ನೊಂದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಪಡುಕೋಣೆ ಹಡವು ನಿವಾಸಿ ಪೆದ್ರು ವಾಝ್ ಎಂಬುವರ ಮಗ ಪ್ಯಾಟ್ರಿಕ್ ವಾಸ್ (63) ಮತ್ತು ಪ್ಯಾಟ್ರಿಕ್ ವಾಸ್ ಅವರ ಮಗಳು ಮಿಸ್ ಪ್ಲೆನ್ಸಿಟಾ (24) ಎಂದು ಗುರುತಿಸಲಾಗಿದೆ.

ಪ್ಯಾಟ್ರಿಕ್ ವಾಝ್ ಅವರು ತಮ್ಮ ಮಗಳು ಪ್ಲೆನ್ಸಿಟಾ ಅವರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದ ವೇಳೆ ದೀಪಕ್ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿರುವ ಪ್ಯಾಟ್ರಿಕ್ ವಾಝ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪ್ಲೆನ್ಸಿಟಾ ಅವರು ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಟೀಮ್ ಎಂ ಎಚ್ ಐ ಗಂಗೊಳ್ಳಿ ತುರ್ತು ಸ್ಪಂದನಾ ತಂಡದ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡ ಗಾಯಗೊಂಡ ಮೂವರನ್ನೂ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ಮೃತ ಯುವಕನ ವಿಳಾಸವನ್ನು ಪತ್ತೆ ಹಚ್ಚಿ ವಾರೀಸುದಾರರಿಗೆ ವಿಷಯ ತಿಳಿಸಿ ಮಾನವೀಯತೆ ಮೆರೆದಿದ್ದಾರೆ. ಗಂಗೊಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
